ವಿಟ್ಲ: ಮಾನವನ ವಿಪರೀತ ಆಸೆಗಾಗಿ ಪ್ರಕೃತಿ ಕೊಟ್ಟ ಕೊಡುಗೆಯನ್ನು ಉಳಿಸುವಲ್ಲಿ ವಿಫಲವಾಗಿ ಪ್ರಕೃತಿಯನ್ನೇ ನಾಶ ಮಾಡಿ ಅಂತರ್ಜಲದ ಮಟ್ಟ ಕಡಿಮೆ ಆಗಿರುವುದನ್ನು ಗಮನಿಸಿ ಪೂಜ್ಯ ಧರ್ಮಸ್ಥಳ ವೀರೇಂದ್ರ ಹೆಗ್ಡೆಯವರ ದೂರ ದೃಷ್ಟಿ ಯೋಜನೆಯೇ “ನಮ್ಮೂರು ನಮ್ಮ ಕೆರೆ ” ಕಾರ್ಯಕ್ರಮ ಆಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಯೋಜನೆ, ಬಿ.ಸಿ ಟ್ರಸ್ಟ್( ರಿ) ಉಡುಪಿ ಇದರ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಅಭಿಪ್ರಾಯ ಪಟ್ಟರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ) ವಿಟ್ಲ ವತಿಯಿಂದ ಸಾಲೆತ್ತೂರು ವಲಯದ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ “ಪುದ್ದೋಟ್ಟು ಕೆರೆ” ಯನ್ನು “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿಯಲ್ಲಿ ಹೂಳೆತ್ತಿ ಪುನಶ್ಚೇತನಗೊಳಿಸಿದ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಕೊಳ್ನಾಡು ಗ್ರಾಮ ಪಂಚಾಯತಿನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಅರ್ಚಕ ರಾಮಚಂದ್ರ ಭಟ್ ಕೊಲ್ನಾಡು ರವರು ಗಂಗಾ ಪೂಜೆ ನೆರವೇರಿಸಿ ಬಾಗಿನ ಸಮರ್ಪಣೆಯ ವಿಧಿ ವಿಧಾನಗಳನ್ನು ನೆರವೇರಿಸಿದರು. ಕೃಷ್ಣಯ್ಯ ಬಲ್ಲಾಳ್ ಅರಮನೆ ವಿಟ್ಲ ಕೆರೆಯ ಪಕ್ಕ ನಾಮಪಲಕ ಅನಾವರಣಗೊಳಿಸಿದರು. ಜನಜಾಗೃತಿ ವೇದಿಕೆಯ ಸದಸ್ಯ ದೇವಿದಾಸ್ ಶೆಟ್ಟಿ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುದ್ದೋಟ್ಟು ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಫ್ ಕೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೆರೆ ಪುನಶ್ಚೇತನಗೊಳಿಸಿ ಪಂಚಾಯತಿಗೆ ನೀಡಿದ್ದಕ್ಕೆ ಪಂಚಾಯತ್ ಯೋಜನೆಗೆ ಆಭಾರಿಯಾಗಿದ್ದೇನೆ ಎಂದರು.
ಕೊಳ್ನಾಡು ಗ್ರಾಮ ಪಂಚಾಯತಿಗೆ ಕೆರೆಯನ್ನು ಹಸ್ತಾಂತರಿಸಿದ ಯೋಜನೆಯ ಪುತ್ತೂರು ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ ಪೂಜ್ಯ ಖಾವಂದರ ಅನುಗ್ರಹದಿಂದ ಸುಮಾರು 1,68,855 ರೂಪಾಯಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಿದ 512ನೇ ಕೆರೆ “ಪುದ್ದೋಟ್ಟು ಕೆರೆ” ಯಾಗಿದ್ದು ಕೆರೆಯ ಪಾವಿತ್ರತೆಯನ್ನು, ಸ್ವಚ್ಛತೆಯನ್ನು ಕಾಪಾಡಿಕೊಂಡು ಗ್ರಾಮಸ್ಥರಿಗೆ ಇದರ ಸದುಪಯೋಗ ಸಿಗುವಂತಾಗಲಿ, ಪಂಚಾಯತ್ ವತಿಯಿಂದ ವಿಶೇಷ ಅನುದಾನದ ಮೂಲಕ ಕೆರೆಯ ಸುತ್ತ ತಡೆಗೋಡೆ ಹಾಗೂ ಗಿಡಗಳ ನಾಟಿ ಮಾಡಿ ರಾಜ್ಯಕ್ಕೆ ಮಾದರಿ ಕೆರೆಯನ್ನಾಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಯೋಜನೆಯ ಜನಮಂಗಳ ಕಾರ್ಯಕ್ರಮದ ಸಲಕರಣೆಗಳನ್ನು ಹಾಗೂ ಸುಜ್ಞಾನ ನಿಧಿ ಮಂಜೂರಾತಿ ಪತ್ರವನ್ನು ಅರ್ಹರಿಗೆ ವಿತರಿಸಲಾಯಿತು.
ವೇದಿಕೆಯಲ್ಲಿ ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ, ಸಾಲೆತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರೇಮಲತಾ, ಕೊಳ್ನಾಡು ಪಂಚಾಯತ್ ಉಪಾಧ್ಯಕ್ಷ ಅಸ್ಮಾ, ಜನಜಾಗೃತಿ ವೇದಿಕೆಯ ಬಂಟ್ವಾಳ ತಾಲೂಕು ಮಾಜಿ ಅಧ್ಯಕ್ಷ ಕೆಯ್ಯುರು ನಾರಾಯಣ ಭಟ್, ಯೋಜನೆಯ ಸಾಲೆತ್ತೂರು ವಲಯ ಅಧ್ಯಕ್ಷ ದಿನೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯ ಸೀತಾರಾಮ್, ಮೊದಲಾದವರು ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಪ್ರಮೀತಾ ಪ್ರಾರ್ಥಿಸಿ, ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಮೋಹಿನಿ ವಂದಿಸಿದರು. ಕೃಷಿ ಅಧಿಕಾರಿ ಚಿದಾನಂದ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳು, ಯೋಜನೆಯ ಸಾಲೆತ್ತೂರು ಒಕ್ಕೂಟಗಳ ಸೇವಾ ಪ್ರತಿನಿಧಿಗಳು, ಶೌರ್ಯ ವಿಪತ್ತು ತಂಡದ ಸದಸ್ಯರುಗಳು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಸದಸ್ಯರುಗಳು, ಗ್ರಾಮಸ್ಥರು ಭಾಗವಹಿಸಿದ್ದರು.