Saturday, June 28, 2025
spot_imgspot_img
spot_imgspot_img

ಚಾರ್ಮಾಡಿ ಘಾಟ್‌ನಲ್ಲಿ ವಿಟ್ಲ ಮೂಲದ ಬೈಕ್‌- ಹಾಸನದ ಕಾರಿನ ನಡುವೆ ಅಪಘಾತ; ಹಲ್ಲೆ ನಡೆಸಿ, ಹಣಕ್ಕೆ ಬೇಡಿಕೆ ಇಟ್ಟು ಬೈಕ್‌ ಕೊಂಡೊಯ್ದರೆಂದು ಸುದ್ದಿ ವೈರಲ್‌- ಸ್ಪಷ್ಟನೆ ನೀಡಿದ ದ.ಕ ಜಿಲ್ಲಾ ಪೊಲೀಸ್‌ ಇಲಾಖೆ

- Advertisement -
- Advertisement -

ಧರ್ಮಸ್ಥಳ: ಚಾರ್ಮಾಡಿ ಘಾಟಿನಲ್ಲಿ ವಿಟ್ಲ ಮೂಲದ ಯುವಕರ ಬೈಕ್‌-ಕಾರು ನಡುವೆ ಅಪಘಾತ ಸಂಭವಿಸಿ ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಇತ್ತಂಡಗಳು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪುಣಚ ನೀರ್ಕಜೆ ನಿವಾಸಿ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದ ಮನೋಜ್‌ ನೀರ್ಕಜೆ (26) ಹಾಗೂ ಅವರ ಸಹಾಯಕ ಮನೀಶ್‌(18) ಅಪಘಾತಕ್ಕೀಡಾದ ಬೈಕ್‌ ಸವಾರರು. ಮೂಡಿಗೆರೆಯಲ್ಲಿರುವ ಮನೋಜ್‌ ಅವರ ಅಕ್ಕನ ಮನೆಯ ಕಾರ್ಯಕ್ರಮದ ನಿಮಿತ್ತ ವಿಟ್ಲದಿಂದ ಮೂಡಿಗೆರೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಚಾರ್ಮಾಡಿ ಘಾಟ್‌ನ ಮೂರನೇ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.

ಪ್ರಕರಣ-1
ಬಂಟ್ವಾಳ ತಾಲೂಕು ಕೇಪು ಗ್ರಾಮದ ನಿವಾಸಿ ಮನೋಜ್‌ರವರು, ಅ 19 ರಂದು ಸಂಜೆ ಚಾರ್ಮಾಡಿ ಘಾಟಿಯ 3 ನೇ ತಿರುವಿನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಾಗ, ನೋಂದಣಿಯಾಗದ ಎರಿಟಿಗಾ ಕಾರನ್ನು ಅದರ ಚಾಲಕ ನಿರ್ಲಕ್ಯತನದಿಂದ ಚಲಾಯಿಸಿ, ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತವೆಸಗಿದ್ದಾನೆ. ಈ ಬಗ್ಗೆ ಬಗ್ಗೆ ಚಾರ್ಮಾಡಿ ಘಾಟಿಯ 1 ನೇ ತಿರುವಿನ ಬಳಿ, ಮಾತುಕತೆ ಮೂಲಕ ಇತ್ಯರ್ಥ ಪಡಿಸುತ್ತಿದ್ದಾಗ, ಅಪಘಾತಪಡಿಸಿದ ಕಾರಿನಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ನನಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ಮನೋಜ್‌ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ. 80/2023 ರಂತೆ ಐಪಿಸಿ ಕಲಂ:279,323,504 ರಡಿ ಪ್ರಕರಣ ದಾಖಲಾಗಿದೆ.

ಪ್ರಕರಣ-2
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾರಿನಲ್ಲಿದ್ದ ಹಾಸನಜಿಲ್ಲೆಯ ಮರಡಿಗೆರೆ ಗ್ರಾಮದ ಅರಸಿಕೆರೆ ಬಳಿ ನಿವಾಸಿ ಲೋಲಮ್ಮ (48) ಎಂಬವರು ಮನೋಜ್ ಹಾಗೂ ಮನೀಶ್ ವಿರುದ್ಧ ಅಪಘಾತ ಹಾಗೂ ಹಲ್ಲೆ ನಡೆಸಿದ ಬಗ್ಗೆ ದೂರು ನೀಡಿದ್ದಾರೆ. ಆರೋಪಿಗಳು ಮಗ ಹಾಗೂ ಪತಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವುದಾಗಿ ಆರೋಪಿಸಿದ್ದು, ಐಪಿಸಿ ಕಲಂ:279,341,323, 504,506 ಜೊತೆಗೆ 34 ರಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 81/2023 ಪ್ರಕರಣ ದಾಖಲಾಗಿರುತ್ತದೆ.

ಬೈಕ್‌-ಕಾರು ನಡುವೆ ಅಪಘಾತ ಸಂಭವಿಸಿ ಬೈಕ್‌ ಸವಾರರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಹಲ್ಲೆ ನಡೆಸಿ, ಹಣಕ್ಕೆ ಬೇಡಿಕೆ ಇಟ್ಟು ಬೈಕ್‌ನ್ನು ಹಾಸನದ ಕಡೆಗೆ ತೆಗೆದುಕೊಂಡು ಹೋಗಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್‌ ಆಗುತ್ತಿತ್ತು.

ಸ್ಪಷ್ಟನೆ ನೀಡಿದ ದ.ಕ ಜಿಲ್ಲಾ ಪೊಲೀಸ್‌

ಧರ್ಮಸ್ಥಳ ಠಾಣಾ ವ್ಯಾಪ್ತಿಯ ಚಾರ್ಮಾಡಿ ಎಂಬಲ್ಲಿ ದಿ 19.10.2023ರಂದು ಸಂಜೆ ಬೈಕ್‌-ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಬೈಕ್‌ ಸವಾರರಿಗೆ ಹಲ್ಲೆ ನಡೆಸಿ, ಅವರ ಬೈಕನ್ನು ಹಾಸನದ ಕಡೆಗೆ ತೆಗೆದುಕೊಂಡು ಹೋಗಿರುತ್ತಾರೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಪ್ರಸಾರವಾಗುತ್ತಿದೆ. ವಾಸ್ತವವಾಗಿ ಚಾರ್ಮಾಡಿಯಲ್ಲಿ ಕಾರು-ಬೈಕ್ ನಡುವೆ ಅಪಘಾತ ನಡೆದ ಬಳಿಕ ಕಾರು ಹಾಗೂ ಬೈಕ್ ನಲ್ಲಿದ್ದವರು ಪರಸ್ಪರ ಜಗಳವಾಡಿಕೊಂಡಿರುತ್ತಾರೆ. ಆ ಬಳಿಕ ಕಾರಿನಲ್ಲಿದ್ದವರು ಸದರಿ ಬೈಕ್ ಅನ್ನು ಅಪಘಾತ ಸ್ಥಳದಿಂದ, ಬೆಳ್ತಂಗಡಿ ಸಂಚಾರ ಠಾಣೆಗೆ ತಂದು ಒಪ್ಪಿಸಿರುತ್ತಾರೆ. ಪ್ರಕರಣ ಮುಂದುವರಿದಂತೆ ಅಪಘಾತ ಪ್ರಕರಣಕ್ಕೆ ಹಾಗೂ ಆ ಬಳಿಕ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಇತ್ತಂಡಗಳಿಂದ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದಾಗಿ ವಿನಂತಿ ಎಂದು ದಕ ಜಿಲ್ಲಾ ಪೊಲೀಸರು ಎಂಬ ಪೇಸ್ ಬುಕ್ ಪೇಜ್‌ನಲ್ಲಿ ಸ್ಪಷ್ಟನೆಯಲ್ಲಿ ನೀಡಿದ್ದಾರೆ.

- Advertisement -

Related news

error: Content is protected !!