

ವಿಟ್ಲ: ಸರ್ವರೂ ಒಪ್ಪಿದ ಸ್ವಚ್ಛ ಭಾಷೆಯಾದ ಕನ್ನಡದ ಕಂಪು ತುಂಬಿದ ಕನ್ನಡನಾಡು ಸುಂದರ, ಸದಾ ಉಳಿಸುವ ಯತ್ನ ನಮ್ಮದಾಗಬೇಕೆಂದು ನಿವೃತ್ತ ಶಿಕ್ಷಕ ನಾರಾಯಣ ಗೌಡ ರವರು, ವಿಟ್ಲ ಬಸವನಗುಡಿಯ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಎಲ್.ಎನ್. ಕೂಡೂರುರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಆಧುನಿಕ ಶಿಕ್ಷಣ ಪದ್ದತಿಯಲ್ಲಿ ಸರ್ವ ಭಾಷೆಗಳಿಗೂ ಪ್ರಾಧಾನ್ಯತೆ ನೀಡಿದ ಸಂಸ್ಥೆ ನಮ್ಮದಾಗಿದ್ದು ಕನ್ನಡ ಭಾಷೆಯ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿದರು. ಮಾತೆ ಭುವನೇಶ್ವರಿಗೆ ಪುಷ್ಪಾರ್ಚನೆಯೊಂದಿಗೆ ಪ್ರಾರ್ಥಿಸಲಾಯಿತು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿಭಾಗದಿಂದ , SSLC ಪರೀಕ್ಷೆ 2022-23ರಲ್ಲಿ ದ. ಕ. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಜೇಸಿ ಶಾಲೆಯ ವಿದ್ಯಾರ್ಥಿನಿ ಸಿಂಚನ ಬಿ .ಸಿ ಯವರನ್ನು ರಾಜ್ಯೋತ್ಸವ ಸಮಾರಂಭದಲ್ಲಿ ಗೌರವಿಸಿ ಪ್ರಶಂಸಿಸಲಾಯಿತು.

ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಜಯರಾಮ ರೈ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ, ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ನಾಡಿನ ವಿವಿಧ ಕವಿಗಳ, ನಾಡಿನ ಉಳಿವಿಗೆ ಹೋರಾಡಿದ ವೀರರನ್ನಾಧರಿಸಿದ ವಿದ್ಯಾರ್ಥಿಗಳ ಛದ್ಮವೇಷ ಸ್ಪರ್ಧೆ, ಕನ್ನಡ ನಾಡಿನ ಹಿರಿಮೆಗಳನ್ನು ಸಾರುವ ಗೀತ ಗಾಯನ, ವಿದ್ಯಾರ್ಥಿ ಭಾಷಣಗಳು, ಹಾಗೂ ಸಾಂಸ್ಕೃತಿಕ ನೃತ್ಯಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ ಸ್ಪರ್ಧೆಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ನಾಡಗೀತೆಯೊಂದಿಗೆ ಮೊದಲ್ಗೊಂಡಿತು. ಸಂಸ್ಥೆಯ ಕನ್ನಡ ಶಿಕ್ಷಕಿ ಜಯಶ್ರೀ ಸ್ವಾಗತಿಸಿ, ಶಿಕ್ಷಕಿ ದೇವಿಕ ಸ್ಪರ್ಧೆಗಳನ್ನು ನಿರ್ವಹಿಸಿದರು. ಆಡಳಿತ ಅಧಿಕಾರಿ ರಾಧಾಕೃಷ್ಣ ಎ ವಂದಿಸಿದರು. ಶಿಕ್ಷಕಿ ನಮಿತ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಶಿಕ್ಷಕಿ ಕವಿತ ಹಾಗೂ ಶೀಲ ಸಹಕರಿಸಿದರು.