ಉಡುಪಿ: ಬ್ರಹ್ಮಾವರ ಇಲ್ಲಿನ ಕರ್ಜೆ ಗುಡ್ಡೆಯಂಗಡಿ ಎಂಬಲ್ಲಿ ವ್ಯಕ್ತಿಯೊಬ್ಬರನ್ನು ಮಾರಕಾಯುಧದಿಂದ ಹೊಡೆದು ಕೊಲೆ ಮಾಡಲಾಗಿದೆ.
ನೆರೆಮನೆಯ ಮಹಿಳೆಯ ಅನೈತಿಕ ಸಂಬಂಧ ವಿಚಾರವಾಗಿ ಪ್ರಶ್ನಿಸಿದ ಕರ್ಜೆ ನವೀನ್ ನಾಯ್ಕ್ (42) ಎಂಬವರನ್ನು ದುಷ್ಕರ್ಮಿಗಳು ಭಾನುವಾರ ರಾತ್ರಿ ಹತ್ಯೆ ಮಾಡಿದ್ದಾರೆ.
ನವೀನ್ ಅವರು ನೆರೆಮನೆಯ ಸರಸ್ವತಿ ಎಂಬವರ ಮನೆಗೆ ಮಲ್ಪೆಯ ಗೌತಮ್ ಪ್ರತಿನಿತ್ಯ ಬರುತ್ತಿದ್ದನ್ನು ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ಗೌತಮ್ ನಿನ್ನೆ ರಾತ್ರಿ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ನವೀನ್ ಮನೆಗೆ ಬಂದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ನವೀನ್ ಮನೆಯವರು ನೆರೆಮನೆ ಸಮಾರಂಭಕ್ಕೆ ಹೋದ ಸಂದರ್ಭ ಕಾರಿನಲ್ಲಿ ಆಗಮಿಸಿದ ಮೂರ್ನಾಲ್ಕು ಮಂದಿ ಮಾತನಾಡಲಿಕ್ಕಿದೆ ಎಂದು ಅವರನ್ನು ಮನೆಯಿಂದ ಹೊರಗೆ ಕರೆದಿದ್ದಾರೆ. ನಂತರ ನವೀನ್ ಮತ್ತು ತಂಡದ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಮಾರಕಾಯುಧದಿಂದ ನವೀನ್ ತಲೆಗೆ ಹೊಡೆದಿದ್ದಾರೆ. ಹೊಡೆತಕ್ಕೆ ಒಳಗಾದ ನವೀನ್ ಅಲ್ಲೇ ಕುಸಿದು ಬಿದ್ದ ಮೃತಪಟ್ಟಿದ್ದ ಎಂದು ಬ್ರಹ್ಮಾವರ ಪೊಲೀಸರು ತಿಳಿಸಿದ್ದಾರೆ.