


ಪುತ್ತೂರು : ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಕ್ಲಾಸಿಕ್ ಬೇಕರಿ ಎಂಬಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇತ್ತಂಡದ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ಅಶ್ಪಿರ್ (17) ಎಂಬವರು ನೀಡಿದ ದೂರಿನಂತೆ, ಮೇ.9 ರಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಕ್ಲಾಸಿಕ್ ಬೇಕರಿಯಲ್ಲಿ ಜ್ಯೂಸ್ ಕುಡಿದ ಗ್ಲಾಸನ್ನು ಸರಿಯಾಗಿ ಗಮನಿಸದೆ ಅಲ್ಲೇ ಇದ್ದ ಇನ್ನೋರ್ವ ಗೋಳಿತೊಟ್ಟು ಗ್ರಾಮದ ಮಹಮ್ಮದ್ ನಹೀಝ್ ಎಂಬವರ ಮೊಬೈಲ್ ಮೇಲೆ ಇಟ್ಟಿದ್ದು, ಇದೇ ವಿಚಾರದಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಅವಾಚ್ಯವಾಗಿ ಬೈದು ಹಲ್ಲೆ ನಡೆದಿತ್ತು. ಅಶ್ಪಿರ್ ರವರ ಸಹೋದರ ಸ್ಥಳಕ್ಕೆ ಬಂದು ಗಾಯಗೊಂಡ ತಮ್ಮನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯದಿದ್ದು, ಆಸ್ಪತ್ರೆಯ ವಠಾರದಲ್ಲಿ ಹೋಗುತ್ತಿರುವಾಗಲೇ ಮಹಮ್ಮದ್ ನಹೀಝ್ ಕಡೆಯವರು ಕಾರಿನಲ್ಲಿ ಬಂದು ಅಶ್ಪಿರ್ ಮತ್ತು ಆತನ ಸಹೋದರನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿ ತೆರಳಿದ್ದಾರೆಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 42/2024, ಕಲಂ:341, 323, 324, 504,506,ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಳಿತ್ತೊಟ್ಟು ಗ್ರಾಮ ,ಕಡಬ ನಿವಾಸಿ ಮಹಮದ್ ನಹೀಝ್ ರವರು, ಆರೋಪಿಗಳಾದ ಅಶ್ವೀರ್, ಮೊಹಿನುದ್ದೀನ್ ಮತ್ತು ಇತರರ ವಿರುದ್ಧ ನೀಡಿದ ಪ್ರತಿದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 43/2024 ಕಲಂ:341, 504,323,506,ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಎರಡೂ ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ.