



ಕಳೆದ ಏಪ್ರಿಲ್ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಬಳಿ ನಡೆದ ಗುಂಡಿನ ದಾಳಿ ಪ್ರಕರಣ ಮುಂಬೈ ಹಾಗೂ ಬಾಲಿವುಡ್ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿತ್ತು. ಏಪ್ರಿಲ್ 14 ರಂದು ನಡೆದ ಈ ಘಟನೆಯಿಂದ ಮುಂಬೈ ಪೊಲೀಸ್ ಕೈಂ ಬ್ರಾಂಚ್ ಈ ಪ್ರಕರಣವನ್ನು ನಿರಂತರವಾಗಿ ನಡೆಸುತ್ತಿದೆ, ಇದೀಗ ಈ ಪ್ರಕರಣದಲ್ಲಿ ಪೊಲೀಸರಿಗೆ ಮತ್ತೊಂದು ಯಶಸ್ಸು ಸಿಕ್ಕಿದೆ.
ಮುಂಬೈ ಪೊಲೀಸರು ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡು ಹಾರಿಸಿದ ಪ್ರಕರಣದ ಆರನೇ ಆರೋಪಿಯನ್ನು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಪ್ರಕರಣದ ಐದನೇ ಆರೋಪಿ ರಾಜಸ್ಥಾನ ಮೂಲದ ಮೊಹಮ್ಮದ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಪಂಜಾಬ್ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಮೊದಲು ಬಂಧಿಸಿದ್ದರು. ಆ ನಂತರ ಇಬ್ಬರು ಆರೋಪಿಗಳು ಗುಜರಾತ್ನ ಭುಜ್ನಲ್ಲಿ ಸಿಕ್ಕಿಬಿದ್ದರು. ಈಗ ರಾಜಸ್ಥಾನ ಮತ್ತು ಹರಿಯಾಣದಿಂದ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತರ ಸಂಖ್ಯೆ ನೋಡುವಾಗ ಪ್ರಕರಣ ಎಷ್ಟು ದೊಡ್ಡ ಮಟ್ಟದಲ್ಲಿದೆ ಎಂಬುದನ್ನು ಗಮನಿಸಬಹುದು.
ಹರಿಯಾಣ ಫತೇಹಾಬಾದ್ ನಿವಾಸಿ ಹರ್ಪಾಲ್ ಸಿಂಗ್ (34) ಬಂಧಿತ ವ್ಯಕ್ತಿ. ಮುಂಬೈ ಕ್ರೈಂ ಪೊಲೀಸ್ ತಂಡವು ಸೋಮವಾರ ರಾತ್ರಿ ಆರೋಪಿಯ ಸ್ವಗ್ರಾಮಕ್ಕೆ ತೆರಳಿ ಸೆರೆ ಹಿಡಿದಿದೆ. ಮಂಗಳವಾರ ಮುಂಜಾನೆ ಆತನನ್ನು ಮುಂಬೈಗೆ ಕರೆತರಲಾಗಿದ್ದು, ಬಳಿಕ ಕೋರ್ಟ್ನ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ದಾಳಿಯ ಹೊಣೆಯನ್ನು ಹೊತ್ತುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಭುಜ್ನಲ್ಲಿ ವಿಕ್ಕಿ ಗುಪ್ತಾ (24 ವರ್ಷ) ಮತ್ತು ಸಾಗರ್ ಪಾಲ್ (21 ವರ್ಷ) ಎಂಬ ಇಬ್ಬರು ಶೂಟರ್ಗಳನ್ನು ಪೊಲೀಸರು ಬಂಧಿಸಿದ್ದರು. ಕೆಲ ದಿನಗಳ ಹಿಂದೆ ಪಂಜಾಬ್ನಿಂದ ಬಂಧಿತನಾಗಿದ್ದ ಅನುಜ್ ಥಾಪನ್ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು.