


ಹಾಸನ ಪೆನ್ಡ್ರೈವ್ ಪ್ರಕರಣದಲ್ಲಿ ಎಸ್ಐಟಿ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಇಂದು ಭಾರತಕ್ಕೆ ಮರಳುವ ನಿರೀಕ್ಷೆ ಹುಸಿಯಾಗಿದೆ. ಜರ್ಮನಿಯ ಮ್ಯೂನಿಕ್ನಿಂದ ಭಾರತಕ್ಕೆ ಮರಳುವ ವಿಮಾನ ಟೇಕಾಫ್ ಆಗಿದ್ದು, ಪ್ರಜ್ವಲ್ ಬೋರ್ಡಿಂಗ್ ಆಗಿಲ್ಲ ಎಂಬ ಮಾಹಿತಿ ಲಭಿಸಿದೆ.
ಇಂದು (ಮೇ 15) ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸುತ್ತಾರೆ ಎನ್ನುವ ಸುದ್ದಿ ಇತ್ತು. ಅಲ್ಲದೇ ಲುಫ್ತಾನ್ಸಾ ವಿಮಾನದಲ್ಲಿ ಮೇ 15 ಕ್ಕೆ ಬಿಸಿನೆಸ್ ಕ್ಲಾಸ್ ರಿಟರ್ನ್ ಟಿಕೆಟ್ ಕೂಡಾ ಬುಕ್ ಮಾಡಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ಗಾಗಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆದರೆ, ಪ್ರಜ್ವಲ್ ರೇವಣ್ಣ, ಕೊನೆ ಕ್ಷಣದಲ್ಲಿ ಮತ್ತೊಮ್ಮೆ ಜಮರ್ನಿಯಿಂದ ವಿಮಾನ ಹತ್ತದೇ ಅಲ್ಲೇ ಉಳಿದುಕೊಂಡಿದ್ದಾರೆ. ಆದರೆ ಇದೀಗ ವಿಮಾನ ಮ್ಯೂನಿಕ್ ನಗರದಿಂದ ಟೇಕಾಫ್ ಆಗಿದ್ದು, ಪ್ರಜ್ವಲ್ ಇಂದು ಬೆಂಗಳೂರಿಗೆ ಮರಳುವುದಿಲ್ಲ ಎಂಬ ಮಾಹಿತಿಯನ್ನು ಎಸ್ಐಟಿ ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ
ಪ್ರಜ್ವಲ್ ಬರಲ್ಲ ಎಂಬ ವಿಚಾರವನ್ನು ವಿಮಾನ ನಿಲ್ದಾಣ ಅಧಿಕಾರಿಗಳ ಮೂಲಗಳಿಂದ ಎಸ್ಐಟಿ ಅಧಿಕಾರಿಗಳು ಖಾತ್ರಿಪಡಿಸಿಕೊಂಡಿದ್ದಾರೆ. ಅಲ್ಲದೇ ವಿಮಾನ ಟೇಕಾಫ್ ಆಗುತ್ತಿದ್ದಂತೆ ಪ್ರಯಾಣಿಕರ ಲಿಸ್ಟ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳ ಕೈ ಸೇರಿದೆ. ಈ ಲಿಸ್ಟ್ನಲ್ಲಿ ಪ್ರಜ್ವಲ್ ಹೆಸರಿಲ್ಲದ್ದರಿಂದ ಪ್ರಜ್ವಲ್ ಇಂದು ಭಾರತಕ್ಕೆ ಆಗಮಿಸುವುದಿಲ್ಲ ಎಂಬುದನ್ನು ವಿಮಾನ ನಿಲ್ದಾಣ ಅಧಿಕಾರಿಗಳು ಖಚಿತಪಡಿಸಿಕೊಂಡು ಎಸ್ಐಟಿ ಅಧಿಕಾರಿಗಳಿಗೂ ಮಾಹಿತಿ ರವಾನಿಸಿದ್ದಾರೆ.