


ಮೂಲ್ಕಿ: ಮರುವಾಯಿ ಚಿಪ್ಪು ಹೆಕ್ಕಲು ಹೋಗಿ ಸಮುದ್ರ ಪಾಲಾದ ಯುವಕನ ಶವ ಹೆಜಮಾಡಿ ಕೋಡಿ ಸಮುದ್ರದಲ್ಲಿ ಪತ್ತೆಯಾಗಿದೆ. ಕಳೆದ ಮೂರು ದಿನಗಳ ಹಿಂದೆ ಬಜಪೆ ಅದ್ಯಪಾಡಿ ಹಳೆ ವಿಮಾನ ನಿಲ್ದಾಣ ಬಳಿ ನಿವಾಸಿ ಅಭಿಲಾಶ್ (24) ಎಂಬಾತ ಮರುವಾಯಿ ಚಿಪ್ಪು ಹೆಕ್ಕಲು ಹೋಗಿ ಸಮುದ್ರ ಪಾಲಾಗಿದ್ದರು.
ಈತ ಮಂಗಳೂರು ರೈಲ್ವೆಯಲ್ಲಿ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದು, ತನ್ನ ಸುಮಾರು ಹತ್ತು ಮಂದಿ ಗೆಳೆಯರೊಂದಿಗೆ ಮುಲ್ಕಿಯ ಕೊಳಚಿ ಕಂಬಳ ಶಾಂಭವಿ ಹೊಳೆಗೆ ಮರುವಾಯಿ ಚಿಪ್ಪು ಹಾಗೂ ಏಡಿ ಹಿಡಿಯಲು ಬಂದಿದ್ದು, ಅಲ್ಲಿ ಹೊಳೆಯಲ್ಲಿ ನೀರಿನ ಇಳಿತ ಇದ್ದ ಕಾರಣ ಮುಂದೆ ಸುಮಾರು ಎರಡು ಕೀ.ಮಿ. ನಡೆದುಕೊಂಡು ಹೋಗಿ ಸಸಿಹಿತ್ತು ಅಳಿವೆ ಬಳಿ ಸಮುದ್ರಕ್ಕಿಳಿದು ತೆರೆಯ ಅಬ್ಬರಕ್ಕೆ ಈತ ನೀರು ಪಾಲಾಗಿದ್ದನು.
ಬಹಳಷ್ಟು ಮುಳುಗು ತಜ್ಞರು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಇದೀಗ ಹೆಜಮಾಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳೀಯ ಯುವಕರು ಶವವನ್ನು ದಡ ಸೇರಿಸಿದ್ದು, ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅಭಿಲಾಷ್ ಅದ್ಯಪಾಡಿಯ ಕೂಲಿಕಾರ್ಮಿಕ ದಂಪತಿ ಎಂ.ಎಂ. ರಮೇಶ್ ಮತ್ತು ಶಾರದಾ ಅವರ ಪುತ್ರನಾಗಿದ್ದು, ಮನೆಯ ಆಧಾರ ಸ್ತಂಭವಾಗಿದ್ದರು. ಅಭಿಲಾಷ್ ಅವರ ಅಕ್ಕನ ವಿವಾಹ ನಿಶ್ಚಿತಾರ್ಥ ಒಂದು ತಿಂಗಳ ಹಿಂದೆಯಷ್ಟೇ ನಡೆದಿತ್ತು. ತಂಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಉತ್ತಮ ಕ್ರೀಡಾಪಟು ಆಗಿದ್ದ ಅಭಿಲಾಷ್ ಅವರು ವಾಲಿಬಾಲ್ ಮತ್ತು ಕ್ರಿಕೆಟ್ನಲ್ಲಿ ಗಮನ ಸೆಳೆದಿದ್ದರು. ಮೆಕಾನಿಕ್ ವಿಭಾಗದಲ್ಲಿ ಐಟಿಐ ಮುಗಿಸಿದ ಬಳಿಕ ಕಳೆದ ನಾಲ್ಕು ವರ್ಷಗಳಿಂದ ಮಂಗಳೂರಿನಲ್ಲಿ ರೈಲ್ವೇಯಲ್ಲಿ ಗುತ್ತಿಗೆ ನೆಲೆಯಲ್ಲಿ ಉದ್ಯೋಗ ಮಾಡುತ್ತಿದ್ದರು.