ಚೆನ್ನೈ: ತಮಿಳು ಕಿರುತೆರೆಯ ಖ್ಯಾತ ನಟಿ ಸುಚಿತ್ರಾ ಮತ್ತು ಆಕೆಯ ಪತಿ ತಮ್ಮ ಸ್ವಂತ ಮನೆಯಲ್ಲಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಕೆಗೆ ಸಾಥ್ ನೀಡಿದವನು ತನ್ನದೇ ಮನೆಗೆ ಕನ್ನ ಹಾಕಲು ಪತ್ನಿಗೆ ಸಹಕರಿಸಿದ ಪತಿರಾಯ ಮಣಿಕಂಠನ್.
ಅಷ್ಟಕ್ಕೂ ಆಗಿದ್ದೇನೆಂದರೆ, ಸುಚಿತ್ರಾ ಇದಾಗಲೇ ಹಲವಾರು ಕಿರುತೆರೆಗಳಲ್ಲಿ ನಟಿಸಿದ್ದಾಳೆ. ಆದರೆ ಲಾಕ್ಡೌನ್ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಕೆಲಸವಿರಲಿಲ್ಲ. ಲಾಕ್ಡೌನ್ ಶುರುವಾದ ಆರಂಭದಲ್ಲಿ ಕೆಲಸ ಅರಸಿ ಬಂದಿದ್ದ ಮಣಿಕಂಠನ್, ಕಿರುತೆರೆ ನಟಿಯರಿಗೆ ಪಿಕ್ಅಪ್, ಡ್ರಾಪ್ ಮಾಡುವ ಕ್ಯಾಬ್ ಚಾಲಕನಾಗಿ ಸೇರಿಕೊಂಡಿದ್ದಾನೆ. ಆ ಸಮಯದಲ್ಲಿ ಸುಚಿತ್ರಾಳ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ, ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದಾರೆ.
ಅಂತೂ ಮಣಿಕಂಠನ್ ಮನೆಯವರು ಸುಚಿತ್ರಾಳನ್ನು ಸೊಸೆಯಾಗಿ ಒಪ್ಪಿಕೊಂಡು ಮನೆತುಂಬಿಸಿಕೊಂಡಿದ್ದಾರೆ. ಈ ವೇಳೆಗಾಗಲೇ ಕಿರುತೆರೆ ಶೂಟಿಂಗ್ ನಿಂತು, ಸುಚಿತ್ರಾಳಿಗೂ ಕೆಲಸವಿರಲಿಲ್ಲ, ಮಣಿಕಂಠನ್ಗೂ ಕೆಲಸವಿರಲಿಲ್ಲ. ಇಬ್ಬರ ಕೈಯಲ್ಲೂ ಹಣವಿರಲಿಲ್ಲ. ಆದರೆ ಮನೆಯಲ್ಲಿ ಸುಮ್ಮನೇ ಇರಲು ಇವರಿಗೆ ಆಗಲಿಲ್ಲ.
ಗಂಡನ ಮನೆಯಲ್ಲಿರುವ ಚಿನ್ನಾಭರಣಗಳ ಮೇಲೆ ಕಣ್ಣುಹಾಕಿದ್ದ ಸುಚಿತ್ರಾ ಅವುಗಳನ್ನು ಕದ್ದು ಪರಾರಿಯಾಗಿ ಬೇರೆ ಕಡೆ ನೆಲೆಸಲು ಗಂಡನನ್ನು ಒಪ್ಪಿಸಿದ್ದಾಳೆ. ಈ ಹಣದಿಂದ ಯೂಟ್ಯೂಬ್ ಚಾನೆಲ್ ನಡೆಸಿ ಅದರಿಂದ ಹಣ ಗಳಿಸಬಹುದು ಎಂದು ಗಂಡನ ತಲೆಯನ್ನು ತಿರುಗಿಸಿದ್ದಾಳೆ. ಅದಕ್ಕಾಗಿ ಗಂಡ-ಹೆಂಡತಿ ತಮ್ಮದೇ ಮನೆಯನ್ನು ದೋಚುವ ಪ್ಲ್ಯಾನ್ ಮಾಡಿದ್ದಾರೆ. ಪ್ಲ್ಯಾನ್ ಮಾಡಿದಂತೆ ಸುಚಿತ್ರಾ ಮೊದಲು ತನಗೆ ಕೆಲಸವಿದೆ ಎಂದು ಕೇಳಿ ಮೊದಲೇ ಮನೆಯಿಂದ ಚೆನ್ನೈಗೆ ಹೊರಟಿದ್ದಾಳೆ. ಮನೆಯಲ್ಲಿ ಆಭರಣ ಕದಿಯುವ ಸಲುವಾಗಿ ಗಂಡ ಮನೆಯಲ್ಲಿಯೇ ಇದದಾನೆ. ನಂತರ ಆತ ಮನೆಯಲ್ಲಿದ್ದ ಎಲ್ಲಾ ಆಭರಣ, ಹಣವನ್ನು ತೆಗೆದುಕೊಂಡು ಮನೆಯಿಂದ ಪರಾರಿಯಾಗಿದ್ದಾನೆ.
ಆಭರಣ ಕಾಣೆಯಾಗಿರುವುದಕ್ಕೆ ಕಂಗಾಲಾದ ಕುಟುಂಬಸ್ಥರು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಇದು ಮಗ-ಸೊಸೆಯದ್ದೇ ಕೈವಾಡ ಎಂದು ತನಿಖೆ ವೇಳೆ ಪೊಲೀಸರಿಗೆ ತಿಳಿದಿದೆ. ಮಣಿಕಂಠನ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ, ಆದರೆ ನಟಿ ಸುಚಿತ್ರಾ ಪೊಲೀಸರಿಂದ ಎಸ್ಕೇಪ್ ಆಗಿ ತಲೆಮರೆಸಿಕೊಂಡಿದ್ದಾಳೆ. ಸದ್ಯ ಅವಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.