

ಬೆಂಗಳೂರು: ವೈದ್ಯರ ಎಡವಟ್ಟಿನಿಂದಾಗಿ 7 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಸಂಪಂಗಿ ರಾಮನಗರದ ಸಿಂಧ್ಯಾ ಆಸ್ಪತ್ರೆಯಲ್ಲಿ ನಡೆದಿದೆ. ಆಪರೇಷನ್ಗೆ ಎಂದು ನೀಡಿದ ಅನಸ್ತೇಷಿಯಾದಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಮೃತಪಟ್ಟ ಬಾಲಕನನ್ನು ಆಡನ್ ಮೈಕಲ್ (7) ಎಂದು ಗುರುತಿಸಲಾಗಿದೆ.
ಬಾಲಕನಿಗೆ ಊಟ ಮಾಡುವಾಗ ಗಂಟಲು ನೋವು ಕಾಣಿಸಿಕೊಂಡಿತ್ತು. ತಕ್ಷಣ ಪೋಷಕರು ಬಾಲಕನನ್ನು ಸಿಂಧ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ವೈದ್ಯರು ಮಗುವಿಗೆ ಆಪರೇಷನ್ ಮಾಡಬೇಕು ಎಂದಿದ್ದಾರೆ.
ಡಾ. ಶ್ವೇತಾ ಪೈ ಎಂಬುವವರು ಬಾಲಕನಿಗೆ ಅನೆಸ್ತೇಷಿಯಾ ನೀಡಿದ್ದರು. ಅನಸ್ತೇಷಿಯಾ ನೀಡಿದ ಬಳಿಕ ಬಾಲಕ ಸಾವನ್ನಪ್ಪಿದ್ದಾನೆ. ಆದರೆ ಈ ವಿಷಯವನ್ನು ವೈದ್ಯರು ಪೋಷಕರಿಗೆ ತಿಳಿಸಿಲ್ಲ. ಬದಲಿಗೆ ಮಗುವಿಗೆ ಹೃದಯ ಸಮಸ್ಯೆಯಿದೆ ಎಂದು ನೆಪ ಹೇಳಿದ್ದಾರೆ. ಇದರಿಂದ ಪೋಷಕರಿಗೆ ಅನುಮಾನ ಹುಟ್ಟಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆಗೆ ಬಂದಾಗ ಬಾಲಕ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಅನಸ್ತೇಷಿಯಾ ಓವರ್ ಡೋಸ್ ಆಗಿದ್ದರಿಂದ ಮಗ ಮೃತಪಟ್ಟಿದ್ದಾನೆ ಎಂದು ಪೊಷಕರು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಲಕ ಮೃತಪಟ್ಟಿದ್ದಾನೆ ಎಂದು ಕಿಡಿಕಾರಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮಗು ಸಾವನ್ನಪ್ಪಿದ ವಿಷಯ ತಿಳಿದು ವೈದ್ಯರು ಎಸ್ಕೇಪ್ ಆಗಿದ್ದಾರೆ.