


ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ಕೆಲವು ಪೋಷಕರಿಗೆ ಪೊಲೀಸ್ ಅಧಿಕಾರಿಗಳೆಂದು ಹೇಳಿ ನಕಲಿ ವ್ಯಕ್ತಿಗಳು ಕರೆ ಮಾಡಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿದೆ.
ಮಂಗಳವಾರ ಮಧ್ಯಾಹ್ನ ವೇಳೆ ಸುರತ್ಕಲ್ ಮತ್ತು ಮಂಗಳೂರಿನ ಕಾಲೇಜುಗಳ ಕೆಲವು ಪೋಷಕರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು “ನಿಮ್ಮ ಮಕ್ಕಳನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆದೊಯ್ಯುತ್ತಿದ್ದೇವೆ. ಬಿಡುಗಡೆ ಮಾಡಬೇಕಾದರೆ ಸಹಾಯ ಮಾಡುತ್ತೇವೆ. 5 ಲ.ರೂ. ನೀಡಿ’, “ನಿಮ್ಮ ಮಕ್ಕಳು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಅದರಿಂದ ರಕ್ಷಿಸಲು ಸಹಾಯ ಮಾಡುತ್ತೇವೆ.’ ಎಂಬಿತ್ಯಾದಿಯಾಗಿ ಹೇಳಿ ಕರೆ ಮಾಡಿದ್ದಾರೆ.
ಇದನ್ನು ನಂಬಿದ ಕೆಲವು ಪೋಷಕರು ಸ್ವಲ್ಪ ಸಮಯ ಆತಂಕಕ್ಕೆ ಒಳಗಾದರು. ಕೆಲವರು ಕಾಲೇಜಿಗೆ ಕರೆ ಮಾಡಿ ವಿಚಾರಿಸಿದರೆ, ಇನ್ನು ಕೆಲವರು ನೇರವಾಗಿ ಕಾಲೇಜಿಗೆ ಹೋಗಿ ವಿಚಾರಿಸಿದ್ದಾರೆ. ಬಳಿಕ ಇದೊಂದು ನಕಲಿ ಕರೆ ಎಂಬುದು ಗೊತ್ತಾಗಿದೆ.ಈ ರೀತಿ ಕರೆ ಸ್ವೀಕರಿಸಿದವರೆಲ್ಲರೂ ಪ್ರಥಮ ಪಿಯುಸಿ ಮಕ್ಕಳ ಪೋಷಕರು. ಕರೆ ಮಾಡಿದವರು ಹಿಂದಿ ಭಾಷೆಯಲ್ಲಿ ಮಾತನಾಡಿದ್ದರು.
ಕರೆ ಬಂದ ನಂಬರನ್ನು ಟ್ರೂಕಾಲರ್ನಲ್ಲಿ ನೋಡಿದಾಗ ಇದು ಸಿಬಿಐ ತನಿಖಾ ಸಂಸ್ಥೆ ಎಂದು ತೋರಿಸುತ್ತದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಇರುವ ಸಮಯದಲ್ಲಿ ಈ ಕರೆ ಬಂದಿದ್ದು, ಮನೆ ಮಂದಿಯನ್ನು ಮೋಸ ಮಾಡಲು ಪ್ರಯತ್ನ ಪಟ್ಟಿದ್ದಾರೆ.