


ಮಂಗಳೂರು : ಮಂಗಳೂರಿನಲ್ಲಿ ಮಂಗಳವಾರ (ಇಂದು) ಮುಂಜಾನೆ ಮತ್ತೊಂದು ದರೋಡೆ ಪ್ರಕರಣ ನಡೆದಿರುವ ಕುರಿತು ವರದಿಯಾಗಿದೆ. ಮಂಗಳೂರಿನ ಉರ್ವ ಕೊಟ್ಟಾರದ ಬಳಿ ಈ ಘಟನೆ ನಡೆದಿದೆ.
ಕೋಟೆಕಣಿ ಒಂದನೇ ಕ್ರಾಸ್ ನ ಕರೀಷ್ಮಾ ಎನ್ನುವ ಮನೆಯಲ್ಲಿ ದರೋಡೆ ನಡೆದಿದೆ. ವಿಕ್ಟರ್ ಮೆಂಡೋನ್ಸಾ (71) ಪ್ಯಾಟ್ರಿಷಾ ಮೆಂಡೋನ್ಸಾ (60) ದಂಪತಿಗಳಿಬ್ಬರು ಮಾತ್ರ ಮನೆಯಲ್ಲಿ ಉಳಿದಿದ್ದರು, ಮಕ್ಕಳಿಬ್ಬರು ವಿದೇಶದಲ್ಲಿದ್ದಾರೆ.
ಬೆಡ್ ರೂಂನ ಕಿಟಿಕಿ ಕಟ್ ಮಾಡಿಕೊಂಡು ರಾತ್ರಿ 1.45 ರಿಂದ ನಾಲ್ಕು ಗಂಟೆಯ ವರೆಗೆ ದರೋಡೆ ಮಾಡಿದ್ದಾರೆ. ದಂಪತಿಗಳಿಬ್ಬರಿಗೂ ಹೊಡೆದಿರುವ ಕಾರಣ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮನೆಯವರಿಗೆ ಮಾರಕಾಯುಧ ತೋರಿಸಿ ಬೆದರಿಸಿ ದರೋಡೆ ಕೃತ್ಯ ನಡೆಸಿದ್ದಾರೆ. ಬಳಿಕ ಮನೆಯ ಕಾರಿನ ಕೀ ಪಡೆದು ಆರೋಪಿಗಳು ಆ ಕಾರಿನಲ್ಲಿ ಉಡುಪಿಯತ್ತ ತೆರಳಿದ್ದಾರೆ. ಬಳಿಕ ಮನೆ ಮಾಲೀಕರ ಕಾರು ಮೂಲ್ಕಿಯಲ್ಲಿ ಪತ್ತೆಯಾಗಿದೆ.
ಅಲ್ಲಿಂದ ಮಂಗಳೂರಿಗೆ ಬಸ್ ನಲ್ಲಿ ಬಂದು ಬಳಿಕ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಸಕಲೇಶಪುರದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಗ್ಯಾಂಗ್ ಚಡ್ಡಿ ಮತ್ತು ಬನಿಯಾನ್ ಧರಿಸಿ ಕಳ್ಳತನ, ದರೋಡೆ ನಡೆಸುವ ತಂಡವಾಗಿದ್ದು ರಾಜಸ್ತಾನ, ಮಧ್ಯಪ್ರದೇಶ ಮೊದಲಾದ ರಾಜ್ಯಗಳಿಗೆ ಸೇರಿದವರು ಇದರಲ್ಲಿದ್ದಾರೆ ಎನ್ನಲಾಗಿದೆ. ಸದ್ಯ ಇಂದು ಪೊಲೀಸರ ದಕ್ಷ ಕಾರ್ಯಾಚರಣೆಯಲ್ಲಿ ಶಂಕಿತ ಚಡ್ಡಿ ಗ್ಯಾಂಗ್ ನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಬಂದಿದೆ. ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.