

ಗರ್ಭಕೋಶದಲ್ಲಿ ಗುಳ್ಳೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಆಪರೇಷನ್ ಥಿಯೇಟರ್ನಲ್ಲಿ ಸಾವನ್ನಪ್ಪಿದ ಘಟನೆ ಯಶವಂತರಪುರಲ್ಲಿ ನಡೆದಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಮುಖ್ಯ ಕಾರಣವೆಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ದಿವ್ಯಾ ಸಾವನ್ನಪ್ಪಿರುವ ಮಹಿಳೆ. ಇವರು 7 ವರ್ಷದ ಹಿಂದೆ ಮದುವೆಯಾಗಿದ್ದರು. ಗರ್ಭಕೋಶದಲ್ಲಿ ಗುಳ್ಳೆ ರೀತಿ ಇದ್ದಿದ್ದರಿಂದ ಮುದ್ರಾ ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮುದ್ರಾ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಯಶವಂತರಪುರದ ತುಳಸಿ ಜೈನ್ ಆಸ್ಪತ್ರೆಗೆ ಮಹಿಳೆ ಬಂದಿದ್ದರು. ಆಸ್ಪತ್ರೆಗೆ ಬರುವಾಗ ಚೆನ್ನಾಗಿಯೇ ನಡೆದುಕೊಂಡು ಬಂದಿದ್ದರು. ಯಾವುದೇ ಸಮಸ್ಯೆ ಇರಲಿಲ್ಲ.
ಆದರೆ ಆಪರೇಷನ್ಗೂ ಮುನ್ನಾ ಮಹಿಳೆಗೆ ಇಸಿಜಿ ಸೇರಿದಂತೆ ಎಲ್ಲ ಟೆಸ್ಟ್ಗಳನ್ನು ಮಾಡಿದ್ದರು. ಇದರಲ್ಲಿ ಎಲ್ಲವೂ ನಾರ್ಮಲ್ ಎಂದು ತೋರಿಸಲಾಗಿದೆ. ಚಿಕ್ಕ ಆಪರೇಷನ್ ಅಷ್ಟೇ ಎಂದು ವೈದ್ಯರು ಆಪರೇಷನ್ ಥಿಯೇಟರ್ಗೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದರು. ಆದರೆ ಆಪರೇಷನ್ ಥಿಯೇಟರ್ಗೆ ಹೋದ ಕೆಲವೇ ನಿಮಿಷದಲ್ಲಿ ಮಹಿಳೆಯ ಮೂಗಿನಲ್ಲಿ ರಕ್ತ, ಬಾಯಲ್ಲಿ ನೊರೆ ಬಂದಿದೆ.
ಇದಾದ ಕೆಲವೇ ನಿಮಿಷದಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಈ ಸಂಬಂಧ ಯಶವಂತರಪುರದ ತುಳಸಿ ಜೈನ್ ಆಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಹೀಗಾಗಿದೆ ಎಂದು ಆರೋಪಿಸಿ ಯಶವಂತರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.