



ಬೆಂಗಳೂರು: ಫ್ರೀಡಂ ಇಂಟರ್ನ್ಯಾಷನಲ್ ಸ್ಕೂಲ್ ಹೆಚ್ ಎಸ್ ಆರ್ ಲೇಔಟ್ ಬೆಂಗಳೂರು ಇಲ್ಲಿ ಅಕ್ಟೋಬರ್ 12 ರಂದು ಅಸ್ಸಾಮೀಸ್ ಅಸೋಸಿಯೇಷನ್ ನವರ ದುರ್ಗಾ ಪೂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ಲೋಕದ ಬಾಲ ಪ್ರತಿಭೆ ಅಶ್ಮಿತ್ ಎ ಜೆ ಮಂಗಳೂರು ಅವರು ಭಕ್ತಿಗೀತೆಯೊಂದಿಗೆ ಎಲ್ಲಾ ಪ್ರೇಕ್ಷಕವರ್ಗದವರನ್ನು ಸಂಗೀತ ಲೋಕದಲ್ಲಿ ತೇಲಾಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೀಕ್ಷಾ ರಾವ್, ದಿಯಾ ರಾವ್ ಮಂಗಳೂರು, ಪ್ರಸೀದ ರಾವ್ ಧರ್ಮಸ್ಥಳ ಇವರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಮಂಗಳೂರಿನ ಪ್ರತಿಭೆಗಳು ದೂರದ ಬೆಂಗಳೂರಿನಲ್ಲಿ ತಮ್ಮ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡುವುದರ ಮೂಲಕ ಜನಮನ್ನಣೆ ಗಳಿಸಿದ್ದಾರೆ.

ಅಕ್ಟೋಬರ್ 13 ರಂದು ಬೆಂಗಳೂರಿನ ತಾವರೆಕೆರೆ ಶ್ರೀ ಮಾರಮ್ಮ ದೇವಿ ದೇವಸ್ಥಾನದ ನವರಾತ್ರಿ ಅಂಬಾರಿ ಉತ್ಸವದಲ್ಲಿ ಶ್ರೀ ಮೋಹನ್ದಾಸ್ ಕೊಟ್ಟಾರಿ ಮುನ್ನೂರು ನೇತೃತ್ವದ ಶ್ರೀ ಶಾರದಾ ಚೆಂಡೆ ಬಳಗ ಜೊತಗೆ ಮಾಸ್ಟರ್ ಅಶ್ಮಿತ್ ಎ ಜೆ ಮಂಗಳೂರು ಇವರ ವಯೋಲಿನ್ ವಾದನವು ನೆರೆದ ಪ್ರೇಕ್ಷರನ್ನು ಆಕರ್ಷಿಸಿತ್ತು.


ನವರಾತ್ರಿ ಉತ್ಸವದ ಅಂಗವಾಗಿ ಬೀದಿ ಬೀದಿಗಳಲ್ಲಿ ಅಂಬಾರಿ ಹೊತ್ತು ಸಾಗುತ್ತಿದ್ದ ಗಜ ಪಡೆಯ ಜೊತೆ ನೆರದ ಜನಸಾಗರ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಶ್ಮಿತ್ ಎ ಜೆ ಮೂಲತಃ ಮಂಗಳೂರಿನವರಾಗಿದ್ದು, ಅತೀ ಕಿರಿಯ ವಯಸ್ಸಿನಲ್ಲಿ ದೊಡ್ಡ ಮಟ್ಟದ ಸಾಧನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಶ್ಮಿತ್ ಬಾಲ ಗಾಯಕನಾಗಿದ್ದು, ಅನೇಕ ವೇದಿಕೆಗಳಲ್ಲಿ ರಿಯಾಲಿಟಿ ಶೋಗಳಲ್ಲಿ ಹಾಗೂ ಅನೇಕ ಸಂಗೀತ ಸ್ಪರ್ಧೆಗಳಲ್ಲಿ ತಮ್ಮ ಗಾಯನದ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ. ಇದೀಗ ತಮ್ಮ ಅದ್ಭುತ ವಯೋಲಿನ್ ನುಡಿಸುವಿಕೆಯ ಮೂಲಕ ಎಲ್ಲರ ಗಮನ ಸೆಳೆದಿದ್ದು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.