



ಹೆಬ್ರಿ: ಕೆನರಾ ಬ್ಯಾಂಕ್ ಕೆವೈಸಿ ಅಪ್ಡೇಟ್ ಹೆಸರಲ್ಲಿ ಅಪರಿಚಿತರು ಹಣ ವಂಚನೆ ಮಾಡಿರುವ ಘಟನೆ ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಬ್ರಿಯ ಶೇಖರ ಎಂಬುವವರ ಮೊಬೈಲಿಗೆ ಕೆವೈಸಿ ಅಪ್ಲೋಡ್ ಎಂಬ ಎಸ್ಎಂಎಸ್ ಬಂದಿದ್ದು ಅದರಂತೆ ಎಸ್ಎಂಎಸ್ನಲ್ಲಿದ್ದ ಸಂಖ್ಯೆಗೆ ಕರೆ ಮಾಡಿದಾಗ ಕೆನರಾ ಬ್ಯಾಂಕಿನವರು ಎಂದು ಹೇಳಿ ನಿಮ್ಮ ಕೆವೈಸಿ ಅಪ್ಡೇಟ್ ಆಗದೆ ಇದ್ದು ಅಕೌಂಟ್ ಬ್ಲಾಕ್ ಮಾಡುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಶೇಖರ್ ಅವರು ಬ್ಯಾಂಕ್ ಖಾತೆ ಸಂಖ್ಯೆ, ಹೆಸರು ವಿಳಾಸ ಹಾಗೂ ಎಟಿಎಂ ಕಾರ್ಡ್ ಕೊನೆಯ ನಾಲ್ಕು ಸಂಖ್ಯೆಯನ್ನು ಕೊಟ್ಟಿದ್ದಾರೆ. ಮಾಹಿತಿ ಅಪ್ಲೋಡ್ ಆದ ನಂತರ ಒಟಿಪಿ ಬರುವುದಾಗಿ ತಿಳಿಸಿ ನಂತರ ಸ್ವಲ್ಪ ಸಮಯದಲ್ಲಿ ಕರೆ ಮಾಡಿ ಒಟಿಪಿ ಕೇಳಿ ಪಡೆದುಕೊಂಡಿದ್ದಾರೆ.
ಬಳಿಕ 15 ನಿಮಿಷಗಳ ನಂತರ ಮತ್ತೆ ಕರೆ ಮಾಡಿ ಕನ್ನಡ ಭಾಷೆಯಲ್ಲಿ ಮಹಿಳೆಯೊಬ್ಬರು ಮಾತನಾಡಿ ಕೆನರಾ ಬ್ಯಾಂಕಿನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ನಿಮ್ಮ ಖಾತೆಯಿಂದ ₹51,908 ಕಡಿತವಾಗಿದ್ದು, ನೀವು 1930 ಕರೆ ಮಾಡಿ ಎಂದು ತಿಳಿಸಿದ್ದಾರೆ. ಇದೇ ಹೊತ್ತಿಗೆ ಗಲಿಬಿಲಿಗೊಂಡ ಶೇಖರ್ ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ 51908 ಕಡಿತಗೊಂಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.