

ಬಳ್ಳಾರಿ: ಎಸ್.ಟಿ ಮೀಸಲು ಕ್ಷೇತ್ರ ಸಂಡೂರು ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಸಂಸದ ತುಕರಾಂ ಅವರ ಪತ್ನಿ ಅನ್ನಪೂರ್ಣ ಅವರು ಗೆಲುವಿನ ನಗೆ ಬೀರಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಲಿದ್ದಾರೆ.ಸಂಡೂರು ವಿಧಾನಸಭೆ ಎಸ್ಟಿ ಮೀಸಲು ಕ್ಷೇತ್ರಕ್ಕೆ ನ.13ರಂದು ಮತದಾನ ನಡೆದಿದ್ದು, ಹಕ್ಕು ಚಲಾಯಿಸಿರುವ ಕ್ಷೇತ್ರದ ಮತದಾರರು, ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರಪಡಿಸಿದ್ದರು.
ಚುನಾವಣೆ ಅಖಾಡದಲ್ಲಿ ಪಕ್ಷೇತರರು ಸೇರಿ ಆರು ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ನಡುವೆ ನೇರ ಫೈಟ್ ಏರ್ಪಟ್ಟಿತ್ತು.ಉಭಯ ಪಕ್ಷಗಳ ಹಾಲಿ, ಮಾಜಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಡಿ.ಕೆ. ಶಿವಕುಮಾರ್, ಸಂಸದ ಗೋವಿಂದ ಕಾರಜೋಳ, ಆರ್. ಅಶೋಕ್, ಹಾಲಿ, ಮಾಜಿ ಸಚಿವರಾದ ಸಂತೋಷ್ಲಾಡ್, ಜಮೀರ್ ಅಹ್ಮದ್ ಖಾನ್, ಬಿ. ನಾಗೇಂದ್ರ, ಬಿ. ಶ್ರೀರಾಮುಲು, ಜಿ. ಜನಾರ್ಧನರೆಡ್ಡಿ ಸೇರಿದಂತೆ ಹಲವಾರು ಪ್ರಬಲ ಮುಖಂಡರು ಕ್ಷೇತ್ರದಲ್ಲಿ ಬೀಡುಬಿಟ್ಟು, ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿರುವುದು, ಕೈ-ಕಮಲ ಪಕ್ಷಗಳ ನಡುವಿನ ಬಿಗ್ ಫೈಟ್ಗೆ ಕಾರಣವಾಗಿತ್ತು.








