

ಉಡುಪಿ: ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡುವ ನಿಟ್ಟಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲು ಯುಕೆಯಲ್ಲಿ ಎಂ ಪಿಎಚ್ ಮಾಡಲು ಸೀಟು ತೆಗೆಸಿಕೊಡುವುದಾಗಿ ಹೇಳಿ ಮೂವರು ವಂಚನೆ ಮಾಡಿದ್ದಾರೆ ಎಂದು ಉಡುಪಿ ನಗರ ಠಾಣೆಯಲ್ಲಿ ಸಂತೋಷ ಎಂಬವರು ದೂರು ದಾಖಲಿಸಿದ್ದರು.
ವೈದ್ಯಕೀಯ ಸೀಟು ಪಡೆಯುವ ನಿಟ್ಟಿನಲ್ಲಿ ದುಬೈಗೆ ತೆರಳಿದ ಸಂತೋಷ್, ಅಫ್ತಾಬ್ ಅವರನ್ನು ಭೇಟಿ ಮಾಡಿದ್ದರು. ನಂತರ ಯುಕೆಯಲ್ಲಿ ಎಂಪಿಎಚ್ ವಿದ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲಕ್ಷಕ್ಕೆ ಇಬ್ಬರ ನಡುವೆ ಒಪ್ಪಂದವಾಗಿದೆ.
ಅಫ್ತಾಬ್ ದುರುದಾರರಿಗೆ ಕರೆ ಮಾಡಿ M.PH ವಿದ್ಯಾಭ್ಯಾಸಕ್ಕಾಗಿ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲಕ್ಷವನ್ನು ನೀಡುವಂತೆ ಕೇಳಿದ್ದಾರೆ. ಇವರು ಎನ್ಆರ್ಎ ಖಾತೆಯನ್ನು ಹೊಂದಿರದ ಕಾರಣ ಹಣವನ್ನು ಜಮಾ ಮಾಡಲು ಅಫ್ತಾಬ್ ಆತನಿಗೆ ಪರಿಚಯವಿರುವ 2ನೇ ಆರೋಪಿ ಸುಮನ್ ಎಸ್ ಎಂಬುವವರನ್ನು ಭೇಟಿ ಆಗುವಂತೆ ತಿಳಿಸಿದ್ದಾನೆ.
ಸಂತೋಷ್ ಅವರು ಉಡುಪಿಗೆ ಆಗಮಿಸಿ ಸುಮನ್ ಎಸ್ ಅವರನ್ನು ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಎಂಟಿಆರ್ ಹೋಟೆಲ್ ನ ಹತ್ತಿರ ಭೇಟಿಯಾಗಿ 8.5 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಬಳಿಕ ಆರೋಪಿಗಳು ಸಂತೊಷ್ ಅವರ ಕರೆಯನ್ನು ಸ್ವೀಕರಿಸದೇ ಹಣವನ್ನು ಕೂಡಾ ಮರಳಿ ನೀಡದೇ ಮೋಸ ಮಾಡಿದ್ದಾರೆ ಎಂದು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಆರೋಪಿಗಳನ್ನು ಬಂಧಿಸಿ ಅವರಿಂದ 5 ಲಕ್ಷ ರೂಪಾಯಿ ಹಾಗೂ ಕಾರು, 2 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.