


ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸ.ನಂ.327ರ ಸರ್ಕಾರಿ ಜಮೀನನ್ನು ಕೈ ಬೆಂಬಲಿತ ಪಂಚಾಯತ್ ಸದಸ್ಯ ಬಾರೆಬೆಟ್ಟು ರಾಜೇಶ್ ಗೌಡ ಎಂಬಾತ ಯಾವ ಮುಲಾಜಿಲ್ಲದೇ ಅತಿಕ್ರಮಣ ಮಾಡಿದ್ದಾನೆ.

ಈ ಬಗ್ಗೆ ಸಾರ್ವಜನಿಕರು ನೀಡಿದ ದೂರಿಗೆ ಸಂಬಂಧಿಸಿದಂತೆ ವಿಟ್ಲ ಕಂದಾಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಅಕ್ರಮ ಕಾಮಗಾರಿ ಬಗ್ಗೆ ಪರಿಶೀಲಿಸಿದ್ದಾರೆ. ಆ ಸಂದರ್ಭ ಸರ್ಕಾರಿ ಜಮೀನಿನಲ್ಲಿ ಹಿಟಾಚಿ ಯಂತ್ರದಿಂದ ಅತಿಕ್ರಮಣ ಮಾಡಿರುವುದು ಸ್ಪಷ್ಟವಾಗಿದೆ. ಸ್ಥಳಕ್ಕಾಗಮಿಸಿದ ಕಂದಾಯ ನಿರೀಕ್ಷಕರು ಮತ್ತು ಪೊಲೀಸರು ಪಂ.ಸದಸ್ಯ ರಾಜೇಶ್ ಗೌಡನ ಅತಿಕ್ರಮಣ ತಡೆದು ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಬಂಟ್ವಾಳ ತಾಲೂಕಿನಾಧ್ಯಂತ ರಾಜಾರೋಷವಾಗಿ ಸರ್ಕಾರಿ ಜಮೀನು ನುಂಗಣ್ಣಗಳು ಅಟ್ಟಹಾಸ ನಡೆಸುತ್ತಿದ್ದರೂ ಬಂಟ್ವಾಳ ತಹಶೀಲ್ದಾರರು ಅದ್ಯಾಕೋ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬುದು ಪ್ರಜ್ಞಾವಂತ ನಾಗರಿಕರ ನೇರ ಆರೋಪವಾಗಿದೆ. ಪಂ.ಸದಸ್ಯನ ಅತಿಕ್ರಮಣ ತಡೆದ ವಿಟ್ಲ ಕಂದಾಯ ನಿರೀಕ್ಷಕರ, ಅಧಿಕಾರಿಗಳ ಹಾಗೂ ಪೊಲೀಸರ ಕಾರ್ಯವೈಖರಿಯನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.
ಸರ್ಕಾರಿ ಜಮೀನು ಅತಿಕ್ರಮಣ ಮಾಡಿದ ಇದೇ ಪಂಚಾಯತ್ ಸದಸ್ಯ ರಾಜೇಶ್ ಗೌಡ ಇತ್ತೀಚೆಗೆ ನಡೆದ ವಿಟ್ಲ ಪಡ್ನೂರು ಸಹಕಾರಿ ಸಂಘದ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿತ ಬಂಡುಕೋರನಾಗಿ ಕಣಕ್ಕಿಳಿದು ಪರಾಭವಗೊಂಡಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ. ತನ್ನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ-ಅನಾಚಾರಗಳನ್ನು ಮಟ್ಟಹಾಕಬೇಕಾಗಿದ್ದ ಜನಪ್ರತಿನಿಧಿಯೇ ಬೇಲಿಯೇ ಎದ್ದು ಹೊಲ ಮೆಯ್ದಂತೆ ಅಕ್ರಮ-ಅತಿಕ್ರಮಣ ನಡೆಸಿರುವುದು ಈತನ ಸಾಚಾತನದ ಮುಖವಾಡ ಕಳಚಿ ಬಿದ್ದಂತಾಗಿದೆ.