

ನವದೆಹಲಿ: ಅಕ್ರಮವಾಗಿ ನೆಲೆಸಿದ್ದ 20ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆಗ್ನೇಯ ಮತ್ತು ದಕ್ಷಿಣ ದೆಹಲಿ ಜಿಲ್ಲೆಗಳಲ್ಲಿ ನಡೆಸಿದ ಸಂಘಟಿತ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ಈ ಕುರಿತು ಉಪಪೊಲೀಸ್ ಆಯುಕ್ತ ಸಚಿನ್ ಶರ್ಮಾ ಮಾಹಿತಿ ನೀಡಿದ್ದು, ಬಂಧಿತ ವ್ಯಕ್ತಿಗಳು ಮಾನ್ಯ ದಾಖಲೆಗಳಿಲ್ಲದೆ ದೇಶವನ್ನು ಪ್ರವೇಶಿಸಿದ್ದರು ಮತ್ತು ಕಾನೂನುಬಾಹಿರವಾಗಿ ವಾಸಿಸುತ್ತಿದ್ದರು. ಕಾರ್ಯಾಚರಣೆಯ ಸಮಯದಲ್ಲಿ, ಅವರ ಬಳಿಯಿಂದ ಹಲವಾರು ಅನುಮಾನಾಸ್ಪದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ (ಮಾ.11) ಪೊಲೀಸರು ರಾಷ್ಟ್ರ ರಾಜಧಾನಿಯ ಹೊರವಲಯದಲ್ಲಿ ವಾಸಿಸುತ್ತಿದ್ದ ಮೂವರು ಅನಧಿಕೃತ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಗಡಿಪಾರು ಮಾಡಿದ ನಂತರ ಭಾರತಕ್ಕೆ ಅಕ್ರಮವಾಗಿ ಮತ್ತೆ ಪ್ರವೇಶಿಸಿದ್ದ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದೆ ಎಂದು ಹೇಳಿದರು.
ಅನಧಿಕೃತ ವಲಸೆಗೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಮತ್ತು ಭದ್ರತೆಯನ್ನು ಬಲಪಡಿಸಲು ಮಾ.10 ರಂದು ಪಿವಿಸಿ ಮಾರುಕಟ್ಟೆ ಮುಂಡ್ಕಾ, ಬಾಬಾ ಹರಿದಾಸ್ ಕಾಲೋನಿ, ಸುಲ್ತಾನ್ ಪುರಿ, ಬೆನಿವಾಲ್ ಲೋಹಾ ಮಂಡಿ, ಇಂದ್ರ ಜೀಲ್ ಮತ್ತು ಹನುಮಾನ್ ಮಂದಿರ ಕಮರುದ್ದೀನ್ ನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪೊಲೀಸ್ ತಂಡಗಳು ದಾಳಿ ನಡೆಸಿದವು ಎಂದು ಡಿಸಿಪಿ ತಿಳಿಸಿದ್ದಾರೆ.