



ಮಂಗಳೂರು: ನಗರದ ಬಜೆ ಕಿನ್ನಿಪದವು ಬಳಿ ನಿನ್ನೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಹಲವು ಬೆಳವಣಿಗೆಗಳು ನಡೆದಿದ್ದು, ಸುಹಾಸ್ ಹತ್ಯೆ ಬೆನ್ನಲ್ಲೇ ‘ಫಿನಿಶ್’ ಅಂತ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ವೈರಲ್ ಆಗಿದ್ದು, ಸದ್ಯ ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದೆ.
ಮಾರ್ಚ್ 31ರಂದೇ ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಅಂದೇ ಟಾರ್ಗೆಟ್ ಕಿಲ್ಲರ್-03 ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಸುಹಾಸ್ ಶೆಟ್ಟಿ ಫೋಟೊ ಹಾಕಿ ಶೀಘ್ರದಲ್ಲೇ ಸೇಡು. ತೀರಿಸಿಕೊಳ್ಳುವುದಾಗಿ ಪ್ರಚೋದನಕಾರಿ ಪೋಸ್ಟ್ ಹಾಕಲಾಗಿತ್ತು.
ಹಂತಕರು ಪಕ್ಕಾ ಪ್ಲಾನ್ ಮಾಡಿಯೇ ಸುಹಾಸ್ ಶೆಟ್ಟಿಯ ಕತೆ ಮುಗಿಸಿದ್ದಾರೆ. ನಿನ್ನೆ ರಾತ್ರಿ 8.30ರ ಸುಮಾರು ಸುಹಾಸ್ ಶೆಟ್ಟಿ ತನ್ನ ಸಹಚರರ ಜೊತೆ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದಾಗ ಮೀನಿನ ಟೆಂಪೋ ಹಾಗೂ ಒಂದು ಸ್ವಿಫ್ಟ್ ಕಾರಿನ ಮೂಲಕ ಸುಹಾಸ್ ಕಾರನ್ನು ಚೇಸ್ ಮಾಡಿದ್ದಾರೆ. ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಬಳಿ ಮೀನಿನ ಟೆಂಪೋ ಮೂಲಕ ಸುಹಾಸ್ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಸುಹಾಸ್ ಕಾರು ಸಲೂನ್ಗೆ ನುಗ್ಗಿದೆ. ಇದೇ ವೇಳೆ ಸ್ವಿಫ್ಟ್ ಕಾರಿನಲ್ಲಿದ್ದ ನಾಲ್ವರು ಹಂತಕರು ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರ ಕಣ್ಣೆದುರೇ ಸುಹಾಸ್ ಮೇಲೆ ಮುಗಿಬಿದ್ದಿದ್ದಾರೆ. ರಸ್ತೆಯಲ್ಲೇ ಕೊಚ್ಚಿಕೊಂದಿದ್ದಾರೆ. ಭೀಕರ ಹತ್ಯೆಯ ಲೈವ್ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ಈ ನಡುವೆ ಕೊಲೆ ನಡೆಸಿದ ಸ್ಥಳದಿಂದ ಹಂತಕರು ಕಾರೊಂದರಲ್ಲಿ ಪಲಾಯನ ಮಾಡುವ ದೃಶ್ಯದ ವೀಡಿಯೊ ಬಹಿರಂಗವಾಗಿದ್ದು, ಇದರಲ್ಲಿ ಹಂತಕರಿಗೆ ಬುರ್ಖಾಧಾರಿ ಮಹಿಳೆಯರಿಬ್ಬರು ಸಹಾಯ ಮಾಡುತ್ತಿರುವುದು ಕಂಡುಬರುತ್ತಿದೆ. ಹಂತಕರು ಕಾರು ಏರುತ್ತಿದ್ದಂತೆ ಓರ್ವ ಯುವತಿಯಂತೆ ಕಾಣುವ ಬುರ್ಖಾಧಾರಿ ಮಹಿಳೆಯರು ಮೊಬೈಲ್ನಲ್ಲಿ ಮಾತನಾಡುತ್ತಾ ಅವರನ್ನು ಸಮೀಪಿಸುತ್ತಿರುವುದು ಮತ್ತು ಆಗ ಇನ್ನೋರ್ವ ಬುರ್ಖಾಧಾರಿ ಮಹಿಳೆ ಅಕೆಯನ್ನು ಎಳೆದುಕೊಂಡು ದೂರ ಹೋಗುತ್ತಿರುವುದು ಕಂಡುಬಂದಿದೆ. ನಂತರ ಬಿಳಿ ಕಾರು ಅಲ್ಲಿಂದ ವೇಗವಾಗಿ ಹೋಗಿದೆ. ಇಷ್ಟೆಲ್ಲ ಸಾರ್ವಜನಿಕರ ಎದುರೇ ನಡೆದಿದ್ದು, ಜನರು ಘಟನೆಯನ್ನು ನೋಡುತ್ತಾ ನಿಂತಿದ್ದರು. ಈ ವೀಡಿಯೊವನ್ನು ಅನೇಕ ಮಂದಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.








