Sunday, June 29, 2025
spot_imgspot_img
spot_imgspot_img

ಕಾರ್ಕಳ: 2 ದಿನದ ಹಸುಗೂಸು 1 ಲಕ್ಷ ರೂ.ಗೆ ಕಾರ್ಕಳದ ದಂಪತಿಗೆ ಮಾರಾಟ; ಮೂವರ ವಿರುದ್ದ ದೂರು ದಾಖಲು..!

- Advertisement -
- Advertisement -

ಕಾರ್ಕಳ: ಹಸುಗೂಸುವೊಂದನ್ನು ಹಣಕ್ಕೆ ಮಾರಾಟ ಮಾಡಿದ ಪ್ರಕರಣವನ್ನು ಚಿಕ್ಕಮಗಳೂರು ಪೊಲೀಸರು ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ದ ಕೇಸು ದಾಖಲಾಗಿದ್ದು ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಒಂದು ಲಕ್ಷ ರೂಪಾಯಿ ಹಣದಾಸೆಗಾಗಿ 2 ದಿನದ ಹಸುಗೂಸನ್ನು ಚಿಕ್ಕಮಗಳೂರಿನ ಎನ್‌ ಆರ್‌ ಪುರ ದಿಂದ ಕಾರ್ಕಳದ ದಂಪತಿಗೆ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಮಗುವಿನ ತಾಯಿ ರತ್ನ, ತಂದೆ ಸದಾನಂದ ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ನರ್ಸ್ ಕುಸುಮಾ ಇವರ ವಿರುದ್ಧ ಕೇಸ್ ದಾಖಲಾಗಿದೆ. ಮಕ್ಕಳಿಲ್ಲದೇ ಕೊರಗುತ್ತಿದ್ದ ಕಾರ್ಕಳದ ರಾಘವೇಂದ್ರ ಎಂಬವರಿಗೆ 2 ದಿನದ ಹೆಣ್ಣು ಮಗುವನ್ನು ಮಾರಾಟ ಮಾಡಲಾಗಿತ್ತು. ತನ್ನ ಹಿರಿಯ ಸಹೋದರಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕುಸುಮಾ ಅವರ ಸಹಾಯ ಪಡೆದಿದ್ದರು.

ಎನ್‌ ಆರ್‌ ಪುರದ ದಂಪತಿಗೆ 1 ಲಕ್ಷ ಹಣ ನೀಡುವುದಾಗಿ ಮುಂಚಿತವಾಗಿ ಮಾತುಕತೆ ನಡೆದಿತ್ತು. ಇದಾದ ಬಳಿಕ ಮಗು ಜನಿಸಿದ ಕೇವಲ ಎರಡೇ ದಿನಕ್ಕೆ ದಂಪತಿಗೆ 5 ಸಾವಿರ ಮುಂಗಡ ಹಣ ಕೊಟ್ಟು ಮಗುವನ್ನು ರಾಘವೇಂದ್ರ ಅವರಿಗೆ ಒಪ್ಪಿಸಲಾಗಿತ್ತು. ಮಗುವಿನ ಆರೋಗ್ಯ ವಿಚಾರಿಸಲೆಂದು ಆಶಾ ಕಾರ್ಯಕರ್ತೆ ದಂಪತಿ ಮನೆಗೆ ಭೇಟಿ ನೀಡಿದಾಗ ಆ ಮನೆಯಲ್ಲಿ ಮಗು ಇಲ್ಲದೇ ಇರುವ ವಿಚಾರ ಬೆಳಕಿಗೆ ಬಂದಿತ್ತು. ತಕ್ಷಣವೇ ಈ ಕುರಿತು ಆಶಾ ಕಾರ್ಯಕರ್ತೆ ಅವರು ಕರ್ತವ್ಯ ನಿಷ್ಠೆ ಮೆರೆದು ಇಲಾಖಾ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮನೆಗೆ ಧಾವಿಸಿ ಪೋಷಕರನ್ನು ವಿಚಾರಿಸಿದಾಗ ಮಗು ಕಾರ್ಕಳಕ್ಕೆ ಮಾರಾಟ ಮಾಡಲಾಗಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣವೇ ಸಿಡಿಪಿಓ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕಾರ್ಕಳಕ್ಕೆ ಬಂದು ರಾಘವೇಂದ್ರ ದಂಪತಿಗಳ ಬಳಿಯಿದ್ದ ಹೆಣ್ಣು ಮಗುವನ್ನು ವಶಕ್ಕೆ ಪಡೆದು ರಕ್ಷಿಸಿದ್ದಾರೆ.

ಮಕ್ಕಳಿಲ್ಲದ ದಂಪತಿ ಮಗು ಬೇಕೆನ್ನುವ ಸಹಜ ಆಸೆಯಿಂದ ಕಾನೂನಿನ ಜ್ಞಾನವಿಲ್ಲದೇ ನಿಯಮಬಾಹಿರವಾಗಿ ಮಗುವನ್ನು ತಂದು ಸಾಕಲು ಮುಂದಾಗಿದ್ದರು. ಆದರೆ ಕಾನೂನು ಪ್ರಕಾರ ದತ್ತು ಪಡೆಯುವ ಅವಕಾಶವಿದ್ದರೂ ಇದನ್ನು ಪಾಲಿಸದ ಹಿನ್ನಲೆಯಲ್ಲಿ ಅಧಿಕಾರಿಗಳು ಮಾನವ ಕಳ್ಳ ಸಾಗಣೆಯ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.

ಹಸುಗೂಸಿನ ತಂದೆ ಸದಾನಂದ ಅನಾರೋಗ್ಯ ಪೀಡಿತರೆಂಬ ಅಂಶ ಬೆಳಕಿಗೆ ಬಂದಿದೆ. ಇದೇ ಹಿನ್ನಲ್ಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ ಓರ್ವನಾದ ಸದಾನಂದ ಅವನನ್ನು ಪೊಲೀಸರು ಬಂಧಿಸಲು ಹಿಂದೇಟು ಹಾಕಿದ್ದಾರೆಂಬ ಮಾಹಿತಿ ಲಭಿಸಿದೆ. ಆರ್ಥಿಕ ಸದೃಢವಲ್ಲದ ದಂಪತಿಗಳು ಚಿಕಿತ್ಸೆ ವೆಚ್ಚಕ್ಕಾಗಿ ತಮ್ಮ ಹಸುಕೂಸನ್ನೇ ಮಾರಾಟ ಮಾಡಿದ್ದಾರೆಯೇ ಎಂಬುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

ಪ್ರಕರಣವು ಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣದ ಕಡತವನ್ನು ಕೊಪ್ಪ ಠಾಣೆಗೆ ವರ್ಗಾಹಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ

- Advertisement -

Related news

error: Content is protected !!