





ಪುತ್ತೂರು: ಪುತ್ತೂರು ನಗರಸಭೆಯ ಸದಸ್ಯ, ರಮೇಶ್ ರೈ ಅವರ ಸಾವಿನ ಪ್ರಕರಣ ಇದೀಗ ತೀವ್ರ ತಿರುವು ಪಡೆದುಕೊಂಡಿದ್ದು, ಅವರ ಆತ್ಮಹತ್ಯೆ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಆರೋಪಿಸಿರುವ ಅವರ ಪುತ್ರ ವಿನೀಶ್ ರೈ, ಸಮಗ್ರ ತನಿಖೆಗೆ ಆಗ್ರಹಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪಾಣೆಮಂಗಳೂರು ಬಳಿಯ ನೇತ್ರಾವತಿ ನದಿ ತೀರದ ಚೆಕ್ವೆಲ್ನಲ್ಲಿ ರಮೇಶ್ ರೈ ಅವರ ಮೃತದೇಹ ಪತ್ತೆಯಾದ ಘಟನೆಯು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಬಿಂಬಿತವಾಗಿತ್ತು. ಆದರೆ, ಅವರ ಸಾವಿನ ಸುತ್ತ ಹಬ್ಬಿರುವ ಅನುಮಾನದ ಹುತ್ತವನ್ನು ಕೆಡವಲು ಕುಟುಂಬದಸದಸ್ಯರು ಮುಂದಾಗಿದ್ದು, ಬೆದರಿಕೆ ಕರೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.”ನನ್ನ ತಂದೆ ದೃಢ ಮನಸ್ಸಿನ, ಸಮಾಜಮುಖಿ ವ್ಯಕ್ತಿ. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ಜಾಯಮಾನದವರಲ್ಲ. ಘಟನೆಯ ದಿನ ಬೆಳಿಗ್ಗೆ 7 ಗಂಟೆಗೆ ಎಂದಿನಂತೆ ಮನೆಯಿಂದ ತೆರಳಿದ್ದರು. ಆದರೆ, ಅವರಿಗೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಕರೆಗಳಿಂದ ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂಬುದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ.” ಎಂದು ವಿನೀಶ್ ರೈ ದೂರಿನಲ್ಲಿ ಉಲ್ಲೇಖಿಸಿದ್ದಾರೆ.