ಮಂಗಳೂರು ಧಕ್ಕೆಯ ಅಳಿವೆ ಬಾಗಿಲಿನಲ್ಲಿ ಸಂಭವಿಸಿದ ಮೀನುಗಾರಿಕಾ ದೋಣಿ ದುರಂತದಿಂದ ಮೃತಪಟ್ಟ ವ್ಯಕ್ತಿಗಳಿಗೆ ಸರಕಾರದಿಂದ ಪರಿಹಾರ ಧನ ಘೋಷಿಸುವ ಕುರಿತು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಬಂದರಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಶಾಸಕ ಕಾಮತ್, ಬೋಟ್ ದುರಂತಕ್ಕೀಡಾಗಿರುವ ವಿಚಾರ ತಿಳಿದು ಮನಸ್ಸಿಗೆ ಅತೀವ ನೋವಾಗಿದೆ. ವಿಚಾರ ತಿಳಿದ ತಕ್ಷಣವೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಇಬ್ಬರ ಮೃತ ದೇಹ ಪತ್ತೆಯಾಗಿದ್ದು ಕಣ್ಮರೆಯಾಗಿರುವ ಮೀನುಗಾರರ ಶೋಧ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಪರಿಹಾರದ ಕುರಿತು ಈಗಾಗಲೇ ಮೀನುಗಾರಿಕಾ ಸಚಿವರೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಸಚಿವರ ಜೊತೆ ಚರ್ಚಿಸಿದ್ದೇನೆ. ಸಚಿವರ ಮೂಲಕ ಮುಖ್ಯಮಂತ್ರಿಗಳಿಗೂ ವಿಚಾರ ತಿಳಿಸಿದ್ದೇವೆ. ತಕ್ಷಣವೇ ಪರಿಹಾರ ಧನ ಘೋಷಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಅದ್ಯಕ್ಷರಾದ ನಿತಿನ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಜಗದೀಶ್ ಶೆಟ್ಟಿ ಬೋಳೂರು, ಮನೋಹರ್ ಶೆಟ್ಟಿ ಕದ್ರಿ, ಕಿಶೋರ್ ಕೊಟ್ಟಾರಿ, ಶೈಲೇಶ್ ಶೆಟ್ಟಿ ಅತ್ತಾವರ, ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ,ಜೆ ಸುರೇಂದ್ರ, ಕಿರಣ್ ರೈ ಎಕ್ಕೂರು, ಸುಜನ್ ದಾಸ್, ವಸಂತ್ ಜೆ ಪೂಜಾರಿ, ಬಂದರು ಇಲಾಖೆಯ ಅಧಿಕಾರಿಗಳ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.