Monday, June 15, 2026
spot_imgspot_img
spot_imgspot_img

ಖ್ಯಾತ ನಟ, ರಾಜಕಾರಣಿ ದಳಪತಿ ವಿಜಯ್ ಮನೆಗೆ ಬಾಂಬ್ ಬೆದರಿಕೆ

- Advertisement -
- Advertisement -

ಚೆನ್ನೈ: ಕರೂರಿನಲ್ಲಿ ಇತ್ತೀಚೆಗೆ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರ್ಯಾಲಿಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41ಕ್ಕೂ ಹೆಚ್ಚು ಜನರು ದುರ್ಮರಣಕ್ಕೊಳಗಾದ ಘಟನೆಯ ಬಳಿಕ, ಟಿವಿಕೆ ಅಧ್ಯಕ್ಷ ಹಾಗೂ ಪ್ರಖ್ಯಾತ ನಟ-ರಾಜಕಾರಣಿ ವಿಜಯ್ ಅವರ ಮನೆಗೆ ಗಂಭೀರ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ಬೆದರಿಕೆ ಕರೆಯು ವಿಜಯ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಟೀಕೆಗಳ ನಡುವೆಯೇ ಬಂದಿದ್ದು, ಚೆನ್ನೈ ನಿಲಂಕರೈಯಲ್ಲಿರುವ ಅವರ ನಿವಾಸದ ಸುತ್ತ ಭದ್ರತಾ ವ್ಯವಸ್ಥೆ ತೀವ್ರಗೊಳಿಸಲಾಗಿದೆ.

ಬಾಂಬ್ ಬೆದರಿಕೆ ಮಾಹಿತಿ ದೊರಕಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ನಡೆಸಿದರೂ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಬಳಿಕ ಅಧಿಕಾರಿಗಳು ಈ ಕರೆ ಸುಳ್ಳು ಎಂದು ದೃಢಪಡಿಸಿದ್ದಾರೆ. ಆದರೆ,ಇದರ ಹಿಂದಿನ ಗುಂಪನ್ನು ಗುರುತಿಸಲು ಪೊಲೀಸರು ಈಗಾಗಲೇ ತನಿಖೆಯನ್ನು ಆರಂಭಿಸಿದ್ದಾರೆ. ಕರೂರಿನ ರ್ಯಾಲಿಯಲ್ಲಿ ಸಂಭವಿಸಿದ ದುರಂತದ ಹೊತ್ತಿನಲ್ಲಿ ಈ ಬೆದರಿಕೆ ಬಂದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನ ಅನೇಕ ಪ್ರಮುಖ ರಾಜಕೀಯ ಮತ್ತು ಕಲಾ ಕ್ಷೇತ್ರದ ವ್ಯಕ್ತಿಗಳಿಗೆ ಕೂಡ ಬಾಂಬ್ ಬೆದರಿಕೆ ಕರೆಗಳು ಬರುತ್ತಿರುವುದು ಆತಂಕ ಮೂಡಿಸಿದೆ. ಒಂದು ವಾರದ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೂ ಬೆದರಿಕೆ ಕರೆ ಬಂದಿದ್ದು, ಅದನ್ನೂ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಅದೇ ರೀತಿ ರಾಜ್ಯಪಾಲ ಆರ್.ಎನ್. ರವಿ, ಡಿಎಂಕೆ ಸಂಸದೆ ಕನಿಮೋಳಿ, ನಟಿ ತ್ರಿಶಾ, ಹಾಸ್ಯನಟ ಎಸ್.ವಿ. ಶೇಖರ್ ಹಾಗೂ ಚೆನ್ನೈನ ಕಮಲಾಲಯಂನಲ್ಲಿ ಇರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯ ಕಚೇರಿ ಸೇರಿದಂತೆ ಹಲವಾರು ಮಹತ್ವದ ಸ್ಥಳಗಳು ಹಾಗೂ ವ್ಯಕ್ತಿಗಳು ಈ ಬೆದರಿಕೆಗಳ ಗುರಿಯಾಗಿದ್ದಾರೆ.

ಇದಲ್ಲದೆ, ಈ ವಾರದ ಆರಂಭದಲ್ಲಿ ಚೆನ್ನೈ ಕಚೇರಿಗೂ ಬಾಂಬ್ ಬೆದರಿಕೆ ಬಂದಿರುವುದು ವರದಿಯಾಗಿದೆ. ಈ ಎಲ್ಲ ಬೆದರಿಕೆಗಳು ರಾಜ್ಯದಲ್ಲಿ ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರ ಚಿಂತನೆಗೆ ಕಾರಣವಾಗಿವೆ. ಕರೂರಿನಲ್ಲಿ ನಡೆದ ದುರಂತದಲ್ಲಿ ನೂರಾರು ಮಂದಿ ತೀವ್ರ ಗಾಯಗೊಂಡಿರುವ ವೇಳೆ, ಈಗ ವಿಜಯ್ ಮನೆಗೆ ಬೆದರಿಕೆ ಬಂದಿರುವುದು ಆತಂಕ ಮೂಡಿಸಿದೆ. ಪೊಲೀಸರು ಪ್ರಕರಣದ ತನಿಖೆ ಮುಂದುವರಿಸುತ್ತಿದ್ದು, ಸುಳ್ಳು ಬೆದರಿಕೆ ಕರೆಯ ಹಿಂದೆ ಇರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

- Advertisement -

Related news

error: Content is protected !!