
ಪುತ್ತೂರು/ ಮಂಗಳೂರು: ಕರಾವಳಿ ಕರ್ನಾಟಕದ ಪ್ರತಿಷ್ಠಿತ ಹಾಗೂ ಅಂತರಾಜ್ಯ ಸಹಕಾರಿ ಸಂಸ್ಥೆಯಾದ ‘ಕ್ಯಾಂಪ್ಕೋ’ ಆಡಳಿತ ಮಂಡಳಿಯ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ‘ಸಹಕಾರ ಭಾರತಿ’ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಒಂದು ಹಂತದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದ ಈ ಮತ ಎಣಿಕೆಯ ಕೊನೆ ಕ್ಷಣದಲ್ಲಿ ಸಹಕಾರ ಭಾರತೀಯ ಅಭ್ಯರ್ಥಿಗಳ ಗೆಲುವಿನ ನಿರೀಕ್ಷೆ ಮೂಡಿತ್ತು. ಕಣದಲ್ಲಿ ಸ್ಪರ್ಧೆಗಿದ್ದ ಎಲ್ಲ 6 ಸ್ಥಾನಗಳನ್ನೂ ಸಹಕಾರ ಭಾರತಿ ತನ್ನದಾಗಿಸಿಕೊಂಡಿದೆ.

ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದರು. ಅಂತಿಮವಾಗಿ ಎಸ್.ಆರ್. ಸತೀಶ್ಚಂದ್ರ, ದಯಾನಂದ ಹೆಗ್ಡೆ, ಮಹೇಶ್ ಚೌಟ, ಪುರುಷೋತ್ತಮ್ ಭಟ್, ಎ.ವಿ. ತೀರ್ಥರಾಮ ಮತ್ತು ಮುರಳಿ ಕೃಷ್ಣ ಚಳ್ಳಂಗಾರು ಅವರು ಭಾರೀ ಅಂತರದ ಮತಗಳಿಂದ ಗೆದ್ದಿದ್ದಾರೆ.

ಒಟ್ಟು 19 ನಿರ್ದೇಶಕ ಸ್ಥಾನಗಳಲ್ಲಿ ಕೇರಳದ 9 ಮತ್ತು ಕರ್ನಾಟಕದ 4 ಸೇರಿದಂತೆ ಒಟ್ಟು 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 6 ಸ್ಥಾನಗಳಿಗೆ ನವೆಂಬರ್ 23ರಂದು ಚುನಾವಣೆ ನಡೆದಿತ್ತು. ಸಂಸ್ಥೆಯಲ್ಲಿ | ಲಕ್ಷಕ್ಕೂ ಅಧಿಕ ಸದಸ್ಯರಿದ್ದರೂ, ಮತದಾನದ ಅರ್ಹತೆ ಇದ್ದದ್ದು ಕೇವಲ 5,576 ಮಂದಿಗೆ ಮಾತ್ರ. ಈ ಪೈಕಿ 2,573 ಮತಗಳು ಚಲಾವಣೆಯಾಗಿದ್ದು (ಶೇ. 15,53), 33 ಮತಗಳು ಅಸಿಂಧುಗೊಂಡಿವೆ.

ಗೆದ್ದ ಅಭ್ಯರ್ಥಿಗಳು ಮತ್ತು ಪಡೆದ ಮತಗಳು
ಮುರಳಿ ಕೃಷ್ಣ ಚಳ್ಳಂಗಾರು: 2,261 (ಅತ್ಯಧಿಕ ಮತ)
ಪುರುಷೋತ್ತಮ ಭಟ್: 2,219
ಮಹೇಶ್ ಚೌಟ 2.216
ಎಸ್.ಆರ್. ಸತೀಶ್ಚಂದ್ರ: 2.181
ದಯಾನಂದ ಹೆಗ್ಡೆ : 2,163
ಎ ವಿ ತೀರ್ಥರಾಮ . : 2,052
ಪರಾಜಿತ ಅಭ್ಯರ್ಥಿಗಳು ಮತ್ತು ಪಡೆದ ಮತಗಳು
ರಾಮ್ ಪ್ರತೀಕ್: 634
ಎಂ.ಜಿ. ಸತ್ಯನಾರಾಯಣ: 620
ಒಟ್ಟಿನಲ್ಲಿ, ದೀರ್ಘಕಾಲದ ಬಳಿಕ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.









