

ಕೋಲ್ಕತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನದಿಯ ಪಟ್ಟಣದ ರೈಲ್ವೆ ಕಾರ್ಮಿಕರ ವಸಾಹತು ಪ್ರದೇಶದ ಸ್ನಾನಗೃಹದ ಹೊರಗೆ ನವಜಾತ ಶಿಶುವನ್ನು ಏಕಾಂಗಿಯಾಗಿ ಬಿಸಾಡಿ ಹೋಗಲಾಗಿತ್ತು. ಶಿಶು ಹುಟ್ಟಿ ಕೆಲವೇ ಗಂಟೆಗಳಾಗಿದ್ದಿರಬಹುದು. ದೇಹವು ರಕ್ತದಿಂದ ತುಂಬಿತ್ತು. ಕಂಬಳಿ ಇರಲಿಲ್ಲ. ಹತ್ತಿರದಲ್ಲಿ ಯಾರೂ ಇರಲಿಲ್ಲ. ಆದರೆ ಮಗು ಸಂಪೂರ್ಣವಾಗಿ ಒಂಟಿಯಾಗಿರಲಿಲ್ಲ. ಈ ದೃಶ್ಯ ಮಾತ್ರ ನಿವಾಸಿಗಳನ್ನು ಬೆಚ್ಚಿ ಬೀಳಿಸಿತ್ತು.



ಹೌದು, ಜನರನ್ನು, ಮಕ್ಕಳನ್ನು ಓಡಿಸಿ ಕಚ್ಚಿ ತಿನ್ನುವ ಬೀದಿನಾಯಿಗಳನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ನವಜಾತ ಶಿಶುವಿಗೆ ರಕ್ಷಣೆ ಒದಗಿಸಿದ್ದು ಬೇರೆ ಯಾರು ಅಲ್ಲ ಈ ಬೀದಿ ನಾಯಿಗಳೆ. ಬೊಗಳಲಿಲ್ಲ, ಕಚ್ಚಲಿಲ್ಲ, ರಾತ್ರಿಯಿಡೀ ಶಿಶುವಿಗೆ ಕಾವಲು ಕಾಯುತ್ತಿತ್ತು. ರಾತ್ರಿಯಿಡೀ ನಾಯಿಗಳು ಯಾರನ್ನೂ ಹತ್ತಿರ ಬಿಡುತ್ತಿರಲಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ. ಬೆಳಿಗ್ಗೆ ಮಗುವನ್ನು ನೋಡಿದ ಮೊದಲಿಗರಲ್ಲಿ ಒಬ್ಬರಾದ ನಿವಾಸಿ ಸುಕ್ಲಾ ಮಂಡಲ್ ರೋಮಾಂಚನಕಾರಿಯಾದ ಘಟನೆಯ ಬಗ್ಗೆ ವಿವರಿಸಿ ನಾಯಿಗಳು ಆಕ್ರಮಣಕಾರಿಯಾಗಿರಲಿಲ್ಲ, ಮಗುವಿಗೆ ರಾತ್ರಿಯಿಂದಲೇ ಕಾವಲು ನಿಂತಿತ್ತು ಎಂದು ಹೇಳಿದ್ದಾರೆ.

ಮತ್ತೊಬ್ಬ ನಿವಾಸಿ ಸುಭಾಷ್ ಪಾಲ್, ಬೆಳಗಿನ ಜಾವ ಸಣ್ಣ ಧ್ವನಿ ಕೇಳಿದ್ದನ್ನು ನೆನಪಿಸಿಕೊಂಡರು. ಹೊರಗೆ ಮಲಗಿದ್ದ ನವಜಾತ ಶಿಶುವಿಗೆ ನಾಯಿಗಳು ಕಾವಲು ಕಾಯುತ್ತಿರುತ್ತವೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಅವು ಕಾವಲುಗಾರರಂತೆ ವರ್ತಿಸುತ್ತಿತ್ತು ಎಂದು ಅವರು ಹೇಳಿದರು. ಕೊನೆಗೆ ಮಹಿಳೆಯೊಬ್ಬರು ಹತ್ತಿರ ಬಂದಾಗ ಮಾತ್ರ ನಾಯಿಗಳು ಪಕ್ಕಕ್ಕೆ ಸರಿದವು. ಆಕೆ ಮಗುವನ್ನು ತನ್ನ ದುಪ್ಪಟ್ಟಾದಲ್ಲಿ ಸುತ್ತಿ ನೆರೆಹೊರೆಯವರನ್ನು ಸಹಾಯಕ್ಕಾಗಿ ಕರೆದಳು.
ಶಿಶುವನ್ನು ಮೊದಲು ಮಹೇಶ್ಗಂಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವನ್ನು ಪರೀಕ್ಷಿಸಿದ ವೈದ್ಯರು ಯಾವುದೇ ಗಾಯಗಳಾಗಿಲ್ಲ ಎಂದು ಹೇಳಿದರು. ತಲೆಯ ಮೇಲಿದ್ದ ರಕ್ತವು ಜನ್ಮ ಗುರುತುಗಳಿಂದಾಗಿರಬಹುದು. ಹೆರಿಗೆಯಾದ ಕೆಲವೇ ಗಂಟೆಗಳ ನಂತರ ಅಲ್ಲ, ನಿಮಿಷಗಳ ನಂತರ ತ್ಯಜಿಸಲಾಗಿದೆ ಎಂದು ವೈದ್ಯರು ಹೇಳಿದರು.
ಕತ್ತಲು ಇದ್ದಿದ್ದರಿಂದ ಯಾರೋ ಮಗುವನ್ನು ಅಲ್ಲಿ ಬಿಟ್ಟು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ನಬದ್ವೀಪ ಪೊಲೀಸರು ಮತ್ತು ಮಕ್ಕಳ ಸಹಾಯ ಸಂಸ್ಥೆಗಳು ವಿಚಾರಣೆ ಆರಂಭಿಸಿದ್ದು, ಮಗುವಿನ ಆರೈಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.








