




ಮಂಗಳೂರು: ಪಾದಚಾರಿಗಳಿಗೆ ಕಾರು ಡಿಕ್ಕಿ ಹೊಡೆದ ಕಾರ್ನ ಚಾಲಕನಿಗೆ ನ್ಯಾಯಾಲಯ ದಂಡ ವಿಧಿಸಿದೆ. ಆರೋಪಿ ಚಾಲಕ ಎಂ.ಶ್ರೀಕಷ್ಣ 2023ರ ಡಿ.24ರಂದು ಪಡೀಲ್ ಕಡೆಯಿಂದ ಬಿಕರ್ಣಕಟ್ಟೆ ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗಿ ಇಬ್ಬರು ಪಾದಚಾರಿಗಳಿಗೆ ಢಿಕ್ಕಿ ಹೊಡೆಯಲು ಕಾರಣರಾಗಿರುವುದಾಗಿ ಆರೋಪಿಸಲಾಗಿತ್ತು.
ಆರೋಪಿ ಚಾಲಕ ಎಂ.ಶ್ರೀಕಷ್ಣ ಸ್ಕೂಟರೊಂದನ್ನು ಎಡಬದಿಯಿಂದ ಓವರ್ ಟೇಕ್ ಮಾಡಿ ರಸ್ತೆಯ ಎಡಬದಿಗೆ ಹೋಗುವ ಭರದಲ್ಲಿ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಹೋದ ಪರಿಣಾಮ ಇಬ್ಬರು ಪಾದಚಾರಿಗಳಿಗೆ ಢಿಕ್ಕಿಯಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತ ಸಂದರ್ಭದಲ್ಲಿ ಕಾರು ಚಾಲಕನ ಚಾಲನಾ ಅನುಜ್ಞಾಪತ್ರದ ಅವಧಿ ಮುಕ್ತಾಯಗೊಂಡಿತ್ತು. ಅಪಘಾತ ಪಡಿಸಿದ ಕಾರಿನ ವಾಯುಮಾಲಿನ್ಯ ಪ್ರಮಾಣ ಪತ್ರದ ಅವಧಿಯು ಊರ್ಜಿತದಲ್ಲಿ ಇರಲಿಲ್ಲ. ವಿಚಾರಣೆ ನಡೆಸಿದ ಮಂಗಳೂರು ಜೆಎಂಎಫ್ ಸಿ 8ನೇ ನ್ಯಾಯಾಲಯದ ನ್ಯಾಯಾಧೀಶ ಫವಾಜ್ ಪಿ.ಎ ಅವರು ಡಿ.15ರಂದು ಆರೋಪಿಗೆ 8,500 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಸಂಚಾರ ಪೂರ್ವ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಉಪನಿರೀಕ್ಷಕ ಈಶ್ವರ ಸ್ವಾಮಿ ಅವರು ಭಾಗಶ: ತನಿಖೆ ನಡೆಸಿ ಪೊಲೀಸ್ ಉಪನಿರೀಕ್ಷಕ ವೈ.ಎನ್.ಚಂದ್ರಮ್ಮ ಪೂರ್ಣ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಗೀತಾ ರೈ ಅವರು ಸಾಕ್ಷಿ ವಿಚಾರಣೆ ನಡೆಸಿದ್ದು, ಸಹಾಯಕ ಸರಕಾರಿ ಅಭಿಯೋಜಕ ಅರೋನ್ ಡಿ ಸೋಜ ವಿಟ್ಲ ಅವರು ವಾದ ಮಂಡಿಸಿದ್ದರು.








