




ಲಕ್ನೋ: ಉತ್ತರ ಪ್ರದೇಶದ ಕುಶಿನಗರದಲ್ಲಿ ವ್ಯಕ್ತಿಯೋರ್ವ ಹೆಂಡತಿ ಹಾಗೂ ತಾಯಿಯನ್ನು ಕೊಲೆ ಮಾಡಿ, ಬಳಿಕ ಅವರ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ತಲೆಯ ಮಾಂಸವನ್ನು ಹೊರತೆಗೆದು ತಿಂದಿರುವ ಅಘಾತಕಾರಿ ಘಟನೆ ನಡೆದಿದೆ. ಸಂತ್ರಸ್ತರ ಕೂಗಾಟ ಕೇಳಿ ಅಲ್ಲಿಗೆ ಓಡಿ ಬಂದ ಅಕ್ಕಪಕ್ಕದ ಮನೆಯವರ ಮುಂದೆಯೇ ಈ ಭೀಕರ ಕೃತ್ಯ ನಡೆದಿದ್ದು, ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಕೊಲೆಯಾದ ಮಹಿಳೆಯರ ಕಿರುಚಾಟ ಕೇಳಿ ಘಟನಾ ಸ್ಥಳಕ್ಕೆ ಸ್ಥಳೀಯರು ಆಗಮಿಸಿದಾಗ, ಆರೋಪಿ ಸಿಕಂದರ್ ಮಾಂಸದ ತುಂಡುಗಳನ್ನು ಅವರ ಮೇಲೆ ಎಸೆಯಲು ಆರಂಭಿಸಿದ್ದು, ಅಲ್ಲಿದ್ದವರಲ್ಲಿ ಭೀತಿಗೆ ಹಾಗೂ ಗೊಂದಲಕ್ಕೆ ಕಾರಣವಾಗಿದೆ. ನಂತರ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಸಿಕಂದರ್(30) ಗುಪ್ತಾ ಎಂದು ಗುರುತಿಸಲಾಗಿದೆ. ಈತ ಮುಂಬೈನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಸುಮಾರು ಒಂದು ತಿಂಗಳ ಹಿಂದಷ್ಟೇ ಗ್ರಾಮಕ್ಕೆ ಮರಳಿದ್ದ. ಮದ್ಯ ಮತ್ತು ಗಾಂಜಾ ವ್ಯಸನಿಯಾಗಿದ್ದ ಈತ ಆಗಾಗ್ಗೆ ತನ್ನ ಹೆಂಡತಿ ಮತ್ತು ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದುದಲ್ಲದೇ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪೊಲೀಸರು ಹೇಳುವ ಪ್ರಕಾರ, ಸಿಕಂದರ್ ಮೊದಲು ತನ್ನ ಹೆಂಡತಿ ಪ್ರಿಯಾಂಕಾ (28) ಮತ್ತು ತಾಯಿ ರೂನಾ ದೇವಿ (60) ಮೇಲೆ ಮನೆಯ ಮೇಲ್ಮಾವಣಿಯ ಕೋಲುಗಳಿಂದ ಹಲ್ಲೆ ನಡೆಸಿದ್ದಾನೆ. ನಂತರ ಸಿಮೆಂಟ್ ಇಟ್ಟಿಗೆಯನ್ನು ಎತ್ತಿಕೊಂಡು ಅವರ ತಲೆಗಳನ್ನು ಒಡೆದು, ಇಬ್ಬರನ್ನೂ ಸ್ಥಳದಲ್ಲೇ ಕೊಂದಿದ್ದಾನೆ. ಬಳಿಕ ಶವಗಳನ್ನು ವಿರೂಪಗೊಳಿಸಿ, ತಲೆಬುರುಡೆಯಿಂದ ಮಾಂಸವನ್ನು ತೆಗೆದು, ಇಡೀ ಗ್ರಾಮದವರ ಮುಂದೆ ಅದನ್ನು ಸೇವಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಡಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆಯ ಭಾಗವಾಗಿ ಪೊಲೀಸರು ಆರೋಪಿಯ ಮಾನಸಿಕ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಕುಶಿನಗರ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.








