


ಭವ್ಯ ಭಾರತ ಇಡೀ ಜಗತ್ತಿನಲ್ಲೇ ವಿಶ್ವಾಸ ಹೆಚ್ಚಿಸಿ, “ವಸುಧೈವ ಕುಟುಂಬಕಂ’ ಎಂಬ ಭಾವನೆಗೆ ಸಾರ್ಥಕತೆ ತರುತ್ತಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಹಿಂದು ಸಮಾಜ, ಹಿಂದು ಸಂಸ್ಕೃತಿ, ಹಿಂದು ಧರ್ಮ ಅನೇಕ ಸಂಘರ್ಷಗಳ ನಂತರವೂ ಅವಿನಾಶಿಯಾಗಿ ಎದ್ದು ನಿಂತಿದೆ. ನಮ್ಮ ಪ್ರತೀ ಕುಟುಂಬಗಳೂ ಇಡೀ ವಿಶ್ವವೇ ಒಂದು ಕುಟುಂಬ, ಇನ್ನೊಬ್ಬರಿಗೆ ಒಳಿತು ಮಾಡುವುದೇ ನಮ್ಮ ಜೀವನದ ಉದ್ದೇಶ ಎಂದು ಬದುಕಿರುವ ಆದರ್ಶ ಜಗತ್ತಿನ ಮುಂದೆ ತೆರೆದುಕೊಂಡಿದೆ. ಒಂದೇ ಗ್ರಾಮ-ಮಂಡಲಗಳಲ್ಲಿ ವಿವಿಧ ಆಚಾರ-ವಿಚಾರ, ನಂಬಿಕೆಗಳಿದ್ದೂ ಸುಖ-ಶಾಂತಿಗಾಗಿ ಒಂದು ಕುಟುಂಬದಂತೆ ಸಮರಸ ಜೀವನ ನಡೆಸುತ್ತಾ ಬದುಕಿದ್ದು ಜೀವನದ ತ್ಯಾಗ-ಸಮರ್ಪಣೆ ಮಾಡಿದ್ದನ್ನೂ ಕಾಣುತ್ತಿದೆ.


ವಿಟ್ಲ ತಾಲೂಕಿನ ಎಲ್ಲಾ ಮಂಡಲಗಳಲ್ಲೂ ‘ಹಿಂದು ಸಂಗಮ’ ಎಂಬ ಹೆಸರಿನಲ್ಲಿ ಪ್ರತಿಯೊಬ್ಬರೂ ಒಂದೆಡೆ ಸೇರಿ ಸಾಮಾಜಿಕ ಚಿಂತನೆ, ಸಹಬಾಳ್ವೆಯ ಭಾವನೆ ಪ್ರಕಟಿಸುವ ವೈಭವದ ಕಾರ್ಯಕ್ರಮ,ಹಿಂದು ಕೌಟುಂಬಿಕ ಮೌಲ್ಯಗಳ ಪುನರುಜ್ಜಿವನ, ಸಾಮಾಜಿಕ ಸಾಮರಸ್ಯದ ಭಾವ ಜಾಗೃತಿ, ಪರಿಸರ ಸಂರಕ್ಷಣೆಯ ಕಾಳಜಿ, ಸ್ವದೇಶಿ ಜೀವನ ಶೈಲಿಯ ಅಳವಡಿಕೆ ಮತ್ತು ನಾಗರೀಕ ಕರ್ತವ್ಯದ ಪಾಲನೆಯ ಸಂಕಲ್ಪ ಸಾಮೂಹಿಕವಾಗಿ ದೃಢಗೊಳಿಸುವ ಸಲುವಾಗಿ ಹಿಂದುಸಂಗಮ ಆಯೋಜನಾ ಸಮಿತಿ ವಿಟ್ಲ ತಾಲೂಕು ಹಮ್ಮಿಕೊಂಡಿರುವ ಇಡ್ಕಿದು, ಕುಳ, ವಿಟ್ಲ ಮೂಡ್ನೂರು ಗ್ರಾಮಗಳನ್ನು ಒಳಗೊಂಡಇಡ್ಕಿದು ಮಂಡಲದ “ಹಿಂದು ಸಂಗಮ” ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಗ್ರಾಮದ ದೇವಸ್ಥಾನಗಳಾದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕುಂಡಡ್ಕ ಹಾಗೂ ಶ್ರೀ ಷಣ್ಮುಖ ಸುಬ್ರಮಣ್ಯ ದೇವಸ್ಥಾನ,ಕೋಲ್ಪೆ ಇಲ್ಲಿ ಶ್ರೀ ದೇವರುಗಳಿಗೆ ಪ್ರಾರ್ಥನೆಯನ್ನು ಸಲ್ಲಿಸಿ ನಡೆಯಿತು.ಹಿಂದು ಸಂಗಮ ಕಾರ್ಯಕ್ರಮವು ಫೆಬ್ರವರಿ 1 ರಂದು ಶ್ರೀ ಶಾರದಾ ಬಡಾವಣೆ ಕುಳ ಗ್ರಾಮ, ಅಳಿಕೆಮಜಲು ಇಲ್ಲಿ ಅಪರಾಹ್ನ ಗಂಟೆ 3ರಿಂದ ಉರಿಮಜಲು ಕೇಂದ್ರದಿಂದ ಶ್ರೀ ಶಾರದಾ ಬಡಾವಣೆ ತನಕ ಭವ್ಯಶೋಭಾಯಾತ್ರೆ ನಡೆದು ತದನಂತರ ಶ್ರೀ ಗುರುದೇವದತ್ತ ಸಂಸ್ಥಾನಮ್, ಓಡಿಯೂರು ಇಲ್ಲಿನ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ಕ್ಷೇತ್ರ ರಜತಾದ್ರಿ ಮುಂಡ್ರಬೈಲು ಇಲ್ಲಿನ ಧರ್ಮದರ್ಶಿಗಳಾದ ಶ್ರೀ ಕೃಷ್ಣಪ್ಪ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಧರ್ಮ ಸಭೆ ನಡೆಯಲಿದೆ.


ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಕುಂಡಡ್ಕ ಹಾಗೂ ಕೋಲ್ಪೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು,ಹಿಂದು ಸಂಗಮ ಆಯೋಜನಾ ಸಮಿತಿ ವಿಟ್ಲ ತಾಲೂಕು ಇದರ ಕಾರ್ಯದರ್ಶಿಗಳಾದ ಶ್ರೀ ಪಿ. ಗೋವಿಂದರಾಜ್ ಪೆರುವಾಜೆ,ಇಡ್ಕಿದು ಮಂಡಲದ ಹಿಂದು ಸಂಗಮದ ಸಂಯೋಜರಾದ ಶ್ರೀ ತಿಮ್ಮಪ್ಪ ಮಂಜಪಾಲು,ವ್ಯವಸ್ಥಾಪಕರಾದ ಶ್ರೀ ಧನರಾಜ್ ಅಮೈ,ಊರಿನ ಪ್ರಮುಖರು ಹಾಗೂ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ನಡೆಯಿತು.








