


ಹೊಸದಿಲ್ಲಿ, ಫೆ. 9: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಯಾವುದೇ ರೀತಿಯ ಅಡಚಣೆಗೆ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದೆ.“ತಾರ್ಕಿಕ ವ್ಯತ್ಯಾಸ” ಪಟ್ಟಿಯಲ್ಲಿ ಮತದಾರರನ್ನು ಸೇರಿಸಿದ ವಿಧಾನವನ್ನು ಪ್ರಶ್ನಿಸುವ ಮಮತಾ ಬ್ಯಾನರ್ಜಿ ಅವರ ಅರ್ಜಿ ಸೇರಿದಂತೆ ಪಶ್ಚಿಮಬಂಗಾಳದ ಎಸ್ಐಆರ್ಗೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಿತು.

ಅಲ್ಲದೆ ಪಶ್ಚಿಮಬಂಗಾಳದಲ್ಲಿ ಎಸ್ಐಆರ್ಗೆ ನೀಡಲಾಗಿದ್ದ ಗಡುವನ್ನು ಮತ್ತೆ ಒಂದು ವಾರಗಳ ಕಾಲ ವಿಸ್ತರಿಸಿತು.“ಯಾವುದೇ ಆದೇಶಗಳು ಅಥವಾ ಸ್ಪಷ್ಟನೆಗಳು ಅಗತ್ಯವಿದ್ದರೆ, ನಾವು ಹೊರಡಿಸುತ್ತೇವೆ. ಆದರೆ, ನಾವು ಎಸ್ಐಆರ್ ಪ್ರಕ್ರಿಯೆಗೆ ಯಾವುದೇ ರೀತಿಯ ಅಡಚಣೆಗೆ ಅವಕಾಶ ನೀಡುವುದಿಲ್ಲ. ಇದನ್ನು ಎಲ್ಲಾ ರಾಜ್ಯಗಳು ಅರ್ಥ ಮಾಡಿಕೊಳ್ಳಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಹೇಳಿದರು.ಎಸ್ಐಆರ್ ಕರ್ತವ್ಯಕ್ಕೆ ಚುನಾವಣಾ ಆಯೋಗಕ್ಕೆ ಬಿ ಗುಂಪಿನ
ಅಧಿಕಾರಿಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಪಶ್ಚಿಮಬಂಗಾಳ ಸರಕಾರಕ್ಕೆ ನಿರ್ದೇಶಿಸಿತು. ಇಸಿಐ ನಿಯೋಜಿಸಿದ ತಳಮಟ್ಟದ ವೀಕ್ಷಕರನ್ನು ಬದಲಾಯಿಸಲು ಅನುಮತಿ ನೀಡಿತು. ಹಕ್ಕು ಪ್ರತಿಪಾದನೆ ಹಾಗೂ ಆಕ್ಷೇಪದ ಬಗ್ಗೆ ಚುನಾವಣಾ ನೋಂದಣಿ ಅಧಿಕಾರಿಗಳು ಮಾತ್ರ ಅಂತಿಮ ಆದೇಶಗಳನ್ನು ನೀಡಬಹುದು ಎಂದು ಸ್ಪಷ್ಟಪಡಿಸಿತು. ತಳಮಟ್ಟದ ವೀಕ್ಷಕರು ನೆರವು ಮಾತ್ರ ನೀಡಬಹುದು ಎಂದು ಹೇಳಿತು.ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ನಿ ಹಾಗೂ ವಿಪುಲ್ ಎಂ. ಪಂಚೋಳಿ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.








