


ಪುತ್ತೂರು: ಪಡ್ನೂರು ಗ್ರಾಮದ ಆರ್ವಾರ ಎಂಬಲ್ಲಿ ಬೈರವ ದೈವಕ್ಕೆ ತಂಬಿಲ ಕಾರ್ಯಕ್ರಮ ಮಾಡುವ ವೇಳೆ ಸ್ಥಳೀಯರಿಬ್ಬರು ಅಕ್ರಮ ಪ್ರವೇಶ ಮಾಡಿ ಕೋವಿ ತೋರಿಸಿ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ದೂರು ನೀಡಲಾಗಿದೆ. ಪಡ್ನೂರು ಗ್ರಾಮದ ಆರ್ವಾರ ಮನೆಯ ಲೋಕೇಶ್ ಶೆಟ್ಟಿಗಾರ್ ಎಂಬವರು ದೂರುದಾರರು. ‘ನಾನು ಫೆ. 10ರಂದು ಸಂಜೆ ನಮ್ಮ ಹಕ್ಕಿನ ಜಾಗೆಯಲ್ಲಿ ಬೈರವ ದೈವಕ್ಕೆ ತಂಬಿಲ ಕಾರ್ಯಕ್ರಮ ಮಾಡುವ ವೇಳೆ ನಮ್ಮ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ಪಡ್ನೂರು ಗ್ರಾಮದ ತೋಟ ನಿವಾಸಿ ನಾರಾಯಣ ಪೂಜಾರಿ ಮತ್ತು ಅವರ ಪತ್ನಿ ಭಾರತಿ ಎಂಬವರು ಬೆದರಿಕೆಯೊಡ್ಡಿದ್ದಾರೆ.

ನಾರಾಯಣ ಪೂಜಾರಿ ಅವರು ನನ್ನ ಮೇಲೆ ಮತ್ತು ಸಂಬಂಧಿಕರ ಹಾಗು ನೆರೆಕರೆಯವರ ಮೇಲೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಕೋವಿಯನ್ನು ತೋರಿಸಿ ಹಾಗು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಮತ್ತು ಹಲ್ಲೆಯನ್ನು ಮಾಡಿರುತ್ತಾರೆ.
ಅವರ ಪತ್ನಿ ಭಾರತಿಯವರು ಗಂಡನಿಗೆ ಪ್ರೋಚದನೆ ನೀಡಿ ಕೇಸ್ ದಾಖಲಾದರೆ ನಾನು ಬಿಡುಗೆಗೊಳಿಸುತ್ತೇನೆ ಎಂದು ಹೇಳುತ್ತಿದ್ದರು. ಆದ್ದರಿಂದ ನಮಗೆ ಜೀವ ಬೆದರಿಕೆಯೊಡ್ಡಿದ್ದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಜೊತೆಗೆ ನಾರಾಯಣ ಪೂಜಾರಿ ಅವರು ಬೆದರಿಕೆಯೊಡ್ಡಿರುವ ಪೊಟೋವನ್ನು ಇರಿಸಲಾಗಿದೆ ಎಂದು ತಿಳಿಸಿದ್ದಾರೆ.








