ಮಂಗಳೂರು/ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಯ ಎರಡನೇ ಹಂತದ ಚುನಾವಣೆಯ ಮತದಾನ ಇಂದು ನಡೆಯಲಿದೆ.
ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕುಗಳ 114 ಗ್ರಾಮ ಪಂಚಾಯತ್ಗಳ 1,500 ಸ್ಥಾನಗಳಿಗೆ ಮತ್ತು ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಕಾಪು ತಾಲೂಕಿನ 86 ಗ್ರಾ.ಪಂ.ಗಳ 1,178 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು ಸಂಜೆ 5ಕ್ಕೆ ಮುಕ್ತಾಯವಾಗಲಿದೆ. ಚುನಾವಣಾ ಕರ್ತವ್ಯಕ್ಕೆ ನೇಮಕ ಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಸ್ಟರಿಂಗ್ ಕೇಂದ್ರ ಗಳಿಂದ ಶನಿವಾರ ಮತಪೆಟ್ಟಿಗೆ, ಮತಪತ್ರ ಸೇರಿದಂತೆ ಚುನಾವಣಾ ಸಾಮಗ್ರಿ ಗಳನ್ನು ಪಡೆದುಕೊಂಡು ನಿಗದಿತ ವಾಹನಗಳಲ್ಲಿ ಪೊಲೀಸ್ ಭದ್ರತೆ ಯೊಂದಿಗೆ ನಿಯೋಜಿತ ಮತದಾನ ಕೇಂದ್ರಗಳಿಗೆ ತೆರಳಿದ್ದಾರೆ. ಗ್ರಾ.ಪಂ. ಚುನಾವಣೆಯಲ್ಲಿ ಇವಿಎಂ ಬದಲು ಮತ ಪೆಟ್ಟಿಗೆ, ಮುದ್ರಿತ ಮತಪತ್ರಗಳ ಬಳಸಲಾಗುತ್ತಿದೆ.
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಹಿರೇಬಂಡಾಡಿ ಗ್ರಾಮ ಪಂಚಾಯತ್ ನ ತಮ್ಮ ಬೂತ್ ನಲ್ಲಿ ಪ್ರಥಮ ಮತದಾನ ಮಾಡಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕುಟುಂಬ ಸಮೇತರಾಗಿ ಆಗಮಿಸಿ ಗರ್ಡಾಡಿ ಶಾಲೆಯಲ್ಲಿ ಮತ ಚಲಾಯಿಸಿದರು.