
ಹೊಸದಿಲ್ಲಿ: ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗುರುವಾರ ರಾತ್ರಿ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಸಂಪೂರ್ಣ ತುರ್ತು ಸನ್ನಿವೇಶ ಘೋಷಿಸಲಾಯಿತು. ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಪ್ರಕಟಿಸಲಾಯಿತು.

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 29ಆರ್ ರನ್ವೇನಲ್ಲಿ ರಾತ್ರಿ 9.30ಕ್ಕೆ ವಿಮಾನ ಸುರಕ್ಷಿತವಾಗಿ ಇಳಿಯಿತು. ಮುಂಜಾಗ್ರತಾ ಕ್ರಮವಾಗಿ ಈ ರನ್ವೇಯಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.”ಲ್ಯಾಂಡಿಂಗ್ಗಿಂತ ಸ್ವಲ್ಪ ಮೊದಲು ಎಂಜಿನ್ನಲ್ಲಿ ಬೆಂಕಿಯ ಎಚ್ಚರಿಕೆ ಕಾಣಿಸಿಕೊಂಡಿದೆ. ಲ್ಯಾಂಡಿಂಗ್ ಆದ ನಂತರ ಬೆಂಕಿ ನಂದಿಸಲಾಯಿತು” ಎಂದು ಮೂಲಗಳು ಹೇಳಿವೆ. ಎ321 (ವಿಟಿ-ಸಿಐಒ) ಏರ್ಬಸ್ ವಿಮಾನವನ್ನು ರನ್ವೇಯಿಂದ ಒಯ್ಯಲಾಗಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು.



ವಿಮಾನದಲ್ಲಿದ್ದ ಎಲ್ಲ 180 ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದ್ದು, ಡಿಜಿಸಿಎ ತಂಡ ತನಿಖೆ ನಡೆಸುತ್ತಿದೆ.”ಬೆಂಗಳೂರಿನಿಂದ 2026ರ ಮೇ 21ರಂದು ದೆಹಲಿಗೆ ಬರುತ್ತಿದ್ದ ಎಐ 2802 ವಿಮಾನವನ್ನು ಒಳಗೊಂಡ ಘಟನೆಯನ್ನು ಏರ್ ಇಂಡಿಯಾ ದೃಢಪಡಿಸುತ್ತದೆ. ದೆಹಲಿಗೆ ವಿಮಾನ ಆಗಮಿಸಿದಾಗ ಕಾಕ್ಪಿಟ್ ಸಿಬ್ಬಂದಿಗೆ ಒಂದು ಎಂಜಿನ್ನಿಂದ ಬೆಂಕಿಯ ಸುಳಿವು ಸಿಕ್ಕಿದೆ. ತಕ್ಷಣ ಇದು ನಿಜ ಎಂದು ದೃಢಪಟ್ಟಿದೆ. ನಿಗದಿತ ಕಾರ್ಯಾಚರಣೆ ವಿಧಿವಿಧಾನಗಳನ್ನು ಸಿಬ್ಬಂದಿ ಪೂರೈಸಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿದಿದೆ.

ಎಲ್ಲ ಸಿಬ್ಬಂದಿ ಹಾಗೂ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸಲಾಗಿದೆ” ಎಂದು ಅಧಿಕೃತ ಪ್ರಕಟಣೆ ಹೇಳಿದೆ.ಸಂಬಂಧಪಟ್ಟ ಏಜೆನ್ಸಿಗಳು ಮತ್ತು ಅಧಿಕಾರಿಗಳ ಜತೆ ಸೇರಿ ಬೆಂಕಿಯ ಕಾರಣ ಪತ್ತೆ ಮಾಡಲು ಏರ್ ಇಂಡಿಯಾ ಪೂರ್ಣ ಪ್ರಮಾಣದ ತನಿಖೆ ಆರಂಭಿಸಿದೆ. ಮತ್ತಷ್ಟು ದೃಢೀಕೃತ ಮಾಹಿತಿಯನ್ನು ಲಭ್ಯವಾದ ತಕ್ಷಣ ಹಂಚಿಕೊಳ್ಳಲು ನಾವು ಬದ್ಧ. ನಮ್ಮ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯೇ ಗರಿಷ್ಠ ಆದ್ಯತೆ” ಎಂದು ವಕ್ತಾರರು ವಿವರಿಸಿದ್ದಾರೆ.









