




ಚೆನ್ನೈ: ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಮುಖ್ಯಮಂತ್ರಿ ಸ್ಥಾನಕ್ಕೆ ಏರಲು ವಿಳಂಬ ಆಗುತ್ತಿರುವುದಕ್ಕೆ ಬೇಸತ್ತ ಪಕ್ಷದ ಕಾರ್ಯಕರ್ತನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಿರುನಲ್ವೇಲಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಇಸಕ್ಕಿಯಪ್ಪನ್ ಎಂದು ಗುರುತಿಸಲಾಗಿದೆ. ಈತನಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ನಾಲ್ಕು ತಿಂಗಳ ಹಿಂದೆ ಇಸಕ್ಕಿಯಪ್ಪನ್, ವಿಜಯ್ ಮುಖ್ಯಮಂತ್ರಿಯಾಗುವುದನ್ನು ನೋಡಬೇಕು ಎಂದು ಸಾರ್ವಜನಿಕವಾಗಿ 16 ಅಡಿ ಉದ್ದದ ಸರಳನ್ನು ತಮ್ಮ ಎರಡೂ ಕೆನ್ನೆಗಳಿಗೆ ಚುಚ್ಚಿಕೊಂಡಿದ್ದರು. ಈಗ ಟಿವಿಕೆ ಸರ್ಕಾರ ರಚನೆಯ ಪ್ರಯತ್ನದಲ್ಲಿದ್ದಾಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಪಕ್ಷವು 108 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಸರ್ಕಾರ ರಚಿಸಲು ಇನ್ನೂ 10 ಸ್ಥಾನಗಳು ಬೇಕಾಗಿವೆ.
ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ಜೊತೆಗೆ, ಟಿವಿಕೆ ಸಿಪಿಐ, ಸಿಪಿಐ(M), ಐಯುಎಂಎಲ್ ಮತ್ತು ವಿಸಿಕೆ ಪಕ್ಷಗಳನ್ನು ಬೆಂಬಲಿಸುವಂತೆ ಟಿವಿಕೆ ಕೋರಿತ್ತು. ಇವೆಲ್ಲವೂ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದವು. ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಕರೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರೂ, ಐಯುಎಂಎಲ್ ಬೆಂಬಲ ನೀಡಲು ನಿರಾಕರಿಸಿದೆ. ಇದರ ನಡುವೆ ವಿಸಿಕೆ ನಿಲುವಿನಲ್ಲಿ ಇನ್ನೂ ಸ್ಪಷ್ಟತೆ ಇಲ್ಲ ಎಂದು ವರದಿ ಮೂಲಕ ತಿಳಿದುಬಂದಿದೆ.








