ಮಂಗಳೂರು, ಮೇ 23: ಡೀಸೆಲ್ ದರ ಏರಿಕೆ, ಬಿಡಿ ಭಾಗಗಳ ಬೆಲೆಯಲ್ಲಿ ಹೆಚ್ಚಳ, ತರಿಗೆ, ವಿಮೆ ಎಂದು ಬಸ್ ಮಾಲಕರು ಹೈರಾಣಾಗಿ ಹೋಗಿದ್ದಾರೆ. ಆದ್ದರಿಂದ ಬಸ್ ಪ್ರಯಾಣ ದರವನ್ನು ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಆದರೆ ಸದ್ಯದ ಮಟ್ಟಿಗೆ ಏರಿಸದಿರಲು ನಿರ್ಧರಿಸಲಾಗಿದೆ. ಒಂದು ತಿಂಗಳು ಕಾದು ಪರಿಸ್ಥಿತಿ ಅವಲೋಕಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ದ.ಕ. ಖಾಸಗಿ ಬಸ್ ಮಾಲಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ, ಪ್ರಯಾಣ ದರ ಪರಿಷ್ಕರಣೆ ಮಾಡದೆ 5 ವರ್ಷಗಳಾಗಿವೆ. ಹಾಗಾಗಿ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಡೀಸೆಲ್ ಬೆಲೆಯಲ್ಲಿ ಒಂದು ತಿಂಗಳ ಕಾಲ ಅವಲೋಕಿಸಿ, ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಮುಂಗಾರು ಪ್ರಾರಂಭವಾಗುತ್ತಿರುವುದರ ಜತೆಗೆ ಶಿಕ್ಷಣ ಸಂಸ್ಥೆಗಳು ಆರಂಭವಾಗುತ್ತಿದ್ದು, ಪ್ರಯಾಣಿಕರು, ವಿದ್ಯಾರ್ಥಿಗಳೊಂದಿಗೆ ಬಸ್ ಚಾಲಕ- ನಿರ್ವಾಹಕರು ಸೌಮ್ಯ ರೀತಿಯಲ್ಲಿ ವರ್ತಿಸುವುದು, ಪ್ರಯಾಣಿಕರಿಗೆ ತೊಂದರೆ ಮಾಡದಿರುವುದು, ಮಳೆಗೆ ಸುರಕ್ಷಿತವಾಗಿ ವಾಹನ ಚಲಾಯಿಸಿ ಪ್ರಯಾಣಿಕರನ್ನು ಗಮ್ಯ ಸ್ಥಾನಕ್ಕೆ ತಲುಪಿಸುವುದು ಇತ್ಯಾದಿಗಳ ಬಗ್ಗೆ ಸಂಘದಿಂದ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.





ಬಿಜೈ ಕೆಎಸ್ಸಾರ್ಟಿಸಿ ಜಂಕ್ಷನ್ ನಲ್ಲಿ ಮಳೆಗಾಲದಲ್ಲಿ ಸಾರ್ವಜನಿಕರು, ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದ್ದು ಸಂಬಂಧಪಟ್ಟವರು ಗಮನಹರಿಸಿ ಸರಿಪಡಿಸಬೇಕು. ಕೆಪಿಟಿ- ನಂತೂರು ಜಂಕ್ಷನ್ ನಲ್ಲಿ ಇನ್ನೂ ಕೆಲವು ಸಮಸ್ಯೆಗಳಿದ್ದು, ದಟ್ಟನೆ ಉಂಟಾಗುತ್ತಿದೆ. ಇದರಿಂದ ಬಸ್ಸುಗಳಿಗೆ ವೇಳಾ ಪಟ್ಟಿಯಂತೆ ಸಂಚರಿಸಲು ಸಮಸ್ಯೆಯಾಗುತ್ತಿದೆ. ನಗರದೊಳಗಿನ ಕುಂಟಿಕಾನ ಜಂಕ್ಷನ್, ಲಾಲ್ ಬಾಗ್, ಪಿವಿಎಸ್, ಬಂಟ್ಸ್ ಹಾಸ್ಟೆಲ್ ಜಂಕ್ಷನ್ ಗಳಲ್ಲೂ ವಿಪರೀತ ದಟ್ಟನೆಯಿಂದ ಬಸ್ಸುಗಳಿಗೆ ಸಾರ್ವಜನಿಕರನ್ನು ಸಮಯಕ್ಕೆ ಸರಿಯಾಗಿ ತಲುಪಿಸುವುದು ದೊಡ್ಡ ಸಮಸ್ಯೆಯಾಗಿದೆ ಎಂದವರು ಹೇಳಿದರು. ಸ್ಟೇಟ್ ಬ್ಯಾಂಕ್ ನಲ್ಲಿ ಪೊಲೀಸ್ ಔಟ್ ಪೋಸ್ಟ್ಸ್ಟೇಟ್ ಬ್ಯಾಂಕ್ ಬಸ್ಸು ನಿಲ್ದಾಣದಲ್ಲಿ ಗೂಡಗಂಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಜೆಯಾಗುತ್ತಲೇ ಅನೈತಿಕ ವ್ಯವಹಾರಗಳು ನಡೆಯುತ್ತವೆ.
ಸಂಜೆ ಬಳಿಕ ಮಹಿಳೆಯರು ಬಸ್ಸಿಗಾಗಿ ಕಾದು ನಿಲ್ಲುವುದು ಕೂಡಾ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಆದ್ದರಿಂದ ಪೊಲೀಸ್ ಔಟ್ ಪೋಸ್ಟ್ ರಚಿಸಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ರಾಮಚಂದ್ರ ನಾಯ್ಕ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಕೋಶಾಧಿಕಾರಿ ಜೋಯೆಲ್ ದಿಲ್ ರಾಜ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.








