
ಬಂಟ್ವಾಳ: ಉಳ್ಳಾಲ ಸಜೀಪನಡು ಗ್ರಾಮದಲ್ಲಿ ಮರದ ಕೊಂಬೆ ಕಡಿಯುವ ವಿಚಾರಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಪರಸ್ಪರ ದೂರುಗಳು ದಾಖಲಾಗಿವೆ.
ಸುರೇಶ್ ರೈ (52) ಅವರ ಮನೆ ಸಮೀಪದಲ್ಲಿರುವ ತಾಯಿಯ ಮನೆಯ ಹಂಚಿಗೆ, ಸೋಮನಾಥ ಭಂಡಾರಿ ನೋಡಿಕೊಳ್ಳುತ್ತಿದ್ದ ಜಮೀನಿನ ಮರದ ಕೊಂಬೆ ತಾಗುತ್ತಿತ್ತು ಎನ್ನಲಾಗಿದೆ. ಈ ಕೊಂಬೆಯನ್ನು ತೆರವುಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆ, ಮೇ 23ರಂದು ಸಂಜೆ ಸುರೇಶ್ ರೈ ಅವರು ಕೊಂಬೆ ಕಡಿಯಲು ಮುಂದಾಗಿದ್ದರು.
ಈ ವೇಳೆ ಸ್ಥಳಕ್ಕೆ ಬಂದ ಸೋಮನಾಥ ಭಂಡಾರಿ ಅವರು ತೆಂಗಿನಕಾಯಿ ಹಾಗೂ ಕಲ್ಲುಗಳನ್ನು ಎಸೆದು ಹಲ್ಲೆ ನಡೆಸಿ ಗಾಯಗೊಳಿಸಿದ್ದಾಗಿ ಆರೋಪಿಸಲಾಗಿದೆ. ಅಲ್ಲದೆ, ಮಧ್ಯ ಪ್ರವೇಶಿಸಿದ ಸುರೇಶ್ ರೈ ಅವರ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಗಾಯಗೊಂಡ ಸುರೇಶ್ ರೈ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 84/2026ರಂತೆ BNS ಸೆಕ್ಷನ್ 118(1), 351(2), 118(2), 115(2), 352 ಹಾಗೂ 74 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇನ್ನೊಂದೆಡೆ, ಸುರೇಶ್ ರೈ ಹಾಗೂ ಅವರ ಪತ್ನಿಯೇ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸೋಮನಾಥ ಭಂಡಾರಿ ಕೂಡ ಪ್ರತಿದೂರು ನೀಡಿದ್ದಾರೆ. ಈ ಕುರಿತೂ ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.








