





ವಿಟ್ಲ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಟ್ಲ ಪಟ್ಟಣ ಪಂಚಾಯತ್ ನ ಸಭಾಂಗಣದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಿಗೆ ಮತ್ತು ಸಿಬ್ಬಂದಿಗಳಿಗೆ ವಿಶ್ವ ಪರಿಸರ ಮತ್ತು ಘನತ್ಯಾಜ್ಯ ನಿರ್ವಹಣೆಯ ನಿಯಮ 2026 ರ ಮಾಹಿತಿ ಕಾರ್ಯಕ್ರಮ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸ್ಥಾಯಿಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿಯವರು ಪರಿಸರ ಸಂರಕ್ಷಣೆಯ, ವನಮಹೋತ್ಸವ ದ ಪ್ರಾಮುಖ್ಯತೆ ಹಾಗೂ ಜಲಸಂರಕ್ಷಣೆಯ ಮಹತ್ವದ ಬಗ್ಗೆ ಮಾತನಾಡಿದರು.ಮುಖ್ಯ ಅತಿಥಿಗಳಾಗಿದ್ದ ವೀರಣ್ಣ, ಉಪ ವಲಯ ಅರಣ್ಯಾಧಿಕಾರಿ, ಪುತ್ತೂರು ಉಪವಲಯ ಇವರು ವಿಶ್ವ ಪರಿಸರಕ್ಕೆ ಸಾಲುಮರದ ತಿಮ್ಮಕ್ಕ ಕೊಟ್ಟ ಕೊಡುಗೆ, ಪರಿಸರ ಸಂರಕ್ಷಣೆಗೆ ಅರಣ್ಯ ಇಲಾಖೆಯಿಂದ ಸಿಗುವ ಸವಲತ್ತು ಮತ್ತು ಯೋಜನೆಗಳ ಮಾಹಿತಿ ನೀಡಿದರು. ಮುಖ್ಯಾಧಿಕಾರಿ ಕರುಣಾಕರ ವಿ ರವರು ಘನತ್ಯಾಜ್ಯ ನಿರ್ವಹಣೆಯ ನಿಯಮ 2026 ರ ಬಗ್ಗೆ ವಿವರಿಸಿ ನಾಲ್ಕು ಬಗೆಯ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ನೀಡಲು ಹಾಗೂ ನಿಯಮದಂತೆ ಬೃಹತ್ ತ್ಯಾಜ್ಯ ಉತ್ಪಾದಕರನ್ನು ಗುರುತಿಸಿ ನೋಂದಾಯಿಸುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ವಿರೋಧ ಪಕ್ಷದ ನಾಯಕರಾದ ಅಶ್ರಫ್ ಹಾಗೂ ಇತರರು, ಅರಣ್ಯ ಇಲಾಖೆಯ ಸಿಬ್ಬಂದಿಯವರು, ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳು ಉಪಸ್ಥಿತರಿದ್ದು ಮಾಹಿತಿಯನ್ನು ಪಡೆದುಕೊಂಡರು.ನಂತರ ಪಳಿಕೆ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಗಿಡ ನೆಡಲಾಯ್ತು.








