




ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ ಸಿಎಂ ಸಿ. ಜೋಸೆಫ್ ವಿಜಯ್ ಅವರು ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಜೊತೆಗೆ ದೇವಿಗೆ ವಿಶೇಷ ಕಾಣಿಕೆಯನ್ನೂ ಅರ್ಪಿಸಿ ಕೃಪೆಗೆ ಪಾತ್ರರಾದರು.
ಶಕ್ತಿ ದೇವಿಗೆ ರೇಷ್ಮೆ ಸೀರೆ, ಫಲ-ತಾಂಬೂಲ ಅರ್ಪಿಸಿ ವಿಜಯ್ ಸುಮಾರು ಅರ್ಧ ಗಂಟೆಗಳ ಕಾಲ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತಾಯಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನ ಕಾಣಿಕೆಯಾಗಿ ಅರ್ಪಿಸಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಬಾಬು ಹೆಗಡೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ದೇವಸ್ಥಾನಕ್ಕೆ ಆಗಮಿಸಿದ ವಿಜಯ್ ಅವರನ್ನು ಹೂಗುಚ್ಛ ನೀಡಿ ಆಡಳಿತ ಮಂಡಳಿಯ ಟ್ರಸ್ಟಿಗಳು ಸ್ವಾಗತ ಕೋರಿದರು. ಮಂತ್ರಘೋಷದೊಂದಿಗೆ ಕ್ಷೇತ್ರದೊಳಗೆ ಅರ್ಚಕ ವೃಂದ ಬರಮಾಡಿಕೊಂಡಿತು.
ಶಲ್ಯ ಧರಿಸಿ ಆಗಮಿಸುವ ಮೂಲಕ ಸಿಎಂ ವಿಜಯ್ ದೇವಸ್ಥಾನದ ಶಿಷ್ಟಾಚಾರ ಪಾಲನೆ ಮಾಡಿ, ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಸಂಕಲ್ಪ ಪೂಜೆ ನೆರವೇರಿಸಲಾಯಿತು. ಸಿಎಂ ವಿಜಯ್ ಸಂಕಲ್ಪ ಪೂಜೆ ಮಾಡಿದರು.
ಯಾವುದೇ ವಿಶೇಷ ಪೂಜೆ, ಸಂಕಲ್ಪ ಇರಲಿಲ್ಲ, ದೇವಿಗೆ ಎಂದಿನಂತೆ ನಡೆಯುವ ಪೂಜೆ ಬಳಿಕ ದೀಪಾರಾಧನೆ ಮಾಡಲಾಯಿತು. ಈ ವೇಳೆ ಸಿಎಂಗೆ ಅರ್ಚಕರು ರಕ್ಷಾ ದಾರ ಕಟ್ಟಿದರು. ಪೂಜೆ ಬಳಿಕ ವಿಜಯ್ ದೇವಸ್ಥಾನದಿಂದ ಹೊರಟರು ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.








