
ಬೆಂಗಳೂರು: ಖಾಸಗಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 6ನೇ ತರಗತಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಗನ ಸಾವಿಗೆ ಶಾಲೆಯ ದೈಹಿಕ ಶಿಕ್ಷಕರ ಹಲ್ಲೆ ಹಾಗೂ ಒತ್ತಡವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

ಮೃತನನ್ನು ಯಲಹಂಕ ಸಮೀಪದ ಕಾಡಯರಪ್ಪನಹಳ್ಳಿ ಖಾಸಗಿ ವಸತಿ ಶಾಲೆಯ ವಿದ್ಯಾರ್ಥಿ ಗುರುಕಿರಣ್ ಎಂದು ಗುರುತಿಸಲಾಗಿದೆ. ‘ಗುರುಕಿರಣ್ಗೆ ಆರೋಗ್ಯ ಸರಿಯಿಲ್ಲ, ಆಸ್ಪತ್ರೆಗೆ ದಾಖಲು ಮಾಡಲಾಗಿದೆ’ ಎಂದು ಬುಧವಾರ ಬೆಳಗ್ಗೆ ಪೋಷಕರಿಗೆ ಕರೆ ಬಂದಿದೆ. ಆದರೆ, ಪೋಷಕರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ವಿದ್ಯಾರ್ಥಿಯನ್ನು ದೈಹಿಕ ಶಿಕ್ಷಕ ಕಬ್ಬಿಣದ ರಾಡ್ನಿಂದ ಹೊಡೆದಿದ್ದು, ಇದರಿಂದ ಮೃತಪಟ್ಟಿದ್ದಾನೆ ಎಂದು ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ದೈಹಿಕ ಶಿಕ್ಷಕ ನಾರಾಯಣ್ ವಿರುದ್ಧ ಬಾಗಲೂರು ಠಾಣಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.ಗುರುಕಿರಣ್ ಬೆಳಿಗ್ಗೆ 5.15ರ ಸುಮಾರಿಗೆ ಎಚ್ಚರಗೊಂಡು ಬೆಳಿಗ್ಗೆ 5.30ರ ಸುಮಾರಿಗೆ ನಿಯಮಿತ ವ್ಯಾಯಾಮಕ್ಕಾಗಿ ಆಟದ ಮೈದಾನಕ್ಕೆ ಹೋಗಿದ್ದು, ಎರಡು ಸುತ್ತು ಓಡಿ ಬಂದ ಕೆಲವೇ ಕ್ಷಣಗಳಲ್ಲಿ ಗುರುಕಿರಣ್ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಗುರುಕಿರಣ್ ಕುಸಿದು ಬೀಳುವ ಮುನ್ನ ಶೌಚಾಲಯಕ್ಕೆ ಹೋಗಿ ತಡವಾಗಿ ಬಂದಿದ್ದಕ್ಕಾಗಿ ದೈಹಿಕ ಶಿಕ್ಷಕ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಸಹಪಾಠಿಯೊಬ್ಬ ಹೇಳಿಕೆ ನೀಡಿದ್ದಾನೆ.

ಸಣ್ಣಪುಟ್ಟ ವಿಷಯಗಳಿಗೂ ಶಿಕ್ಷಕ ಕೋಲಿನಿಂದ ಹೊಡೆಯುತ್ತಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.ವಿದ್ಯಾರ್ಥಿಯ ಹಠಾತ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶಾಲಾ ಆವರಣದಲ್ಲಿ ಪೋಷಕರು ಮತ್ತು ಆತನ ಸಂಬಂಧಿಕರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.









