


ವಿಟ್ಲ: ಸಮುದಾಯ ಆರೋಗ್ಯ ಕೇಂದ್ರ, ವಿಟ್ಲದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ. ವಿಶ್ವೇಶ್ವರ ವಿ.ಕೆ ಅವರು, “ತಾಯಿ ಹಾಲು ಅಮೃತಕ್ಕೆ ಸಮಾನ. ಮಗು ಹುಟ್ಟಿದ ದಿನದಿಂದ ಆರು ತಿಂಗಳವರೆಗೆ ಕೇವಲ ಎದೆ ಹಾಲು ಮಾತ್ರ ನೀಡಬೇಕು. ನಂತರ ನೀಡಬೇಕಾದ ಪೂರಕ ಆಹಾರದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಅಶೋಕ್ ಕುಮಾರ್ ರೈ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಮುದಾಯ ಆರೋಗ್ಯ ಕೇಂದ್ರ, ವಿಟ್ಲದ ವೈದ್ಯಾಧಿಕಾರಿ ಡಾ. ಶಮನ್ ಜೆ. ಶೆಟ್ಟಿ ಅವರು ಆಟಿ ತಿಂಗಳಿನ ಮಹತ್ವ ಹಾಗೂ ಆಟಿ ತಿಂಗಳಿನಲ್ಲಿ ಪೂರ್ವಜರು ತಯಾರಿಸುತ್ತಿದ್ದ ಆಹಾರದಲ್ಲಿದ್ದ ಪೌಷ್ಟಿಕ ಅಂಶಗಳ ಬಗ್ಗೆ ತಿಳಿಸಿದರು.

ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಮಶೀಲಾ, ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿ ಡಾ. ಸುಧಾಕರ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಮತಿ ಕುಸುಮ ಅವರು ಸ್ವಾಗತಿಸಿ, ನಿರೂಪಿಸಿದರು. ಹಿರಿಯ ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಮತಿ ಇಂದಿರಾ ಅವರು ವಂದಿಸಿದರು.


ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಅಧ್ಯಕ್ಷರು, ಸದಸ್ಯರು, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಯೆನಪೋಯ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.








