


ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸರಪಾಡಿ ನಿವಾಸಿ ಜಯಂತ್ (47) ಬಂಧಿತ ಆರೋಪಿ.
ಪ್ರಕರಣದ ದೂರುದಾರರ 16 ವರ್ಷದ ಮಗಳು ಬಂಟ್ವಾಳದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೆಲವು ದಿನಗಳಿಂದ ಮಧ್ಯವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿಯನ್ನು ಬಸ್ನಲ್ಲಿ ಬರುವಾಗ ಹಿಂಬಾಲಿಸುತ್ತಿದ್ದ. ಆಗಸ್ಟ್ 19 ರಂದು ಸಂಜೆ ಬಾಲಕಿ ಕಲ್ಲಡ್ಕ ಬಸ್ ನಿಲ್ದಾಣಕ್ಕೆ ಬಂದಾಗಲೂ ಅದೇ ವ್ಯಕ್ತಿ ಬಾಲಕಿಯನ್ನು ಗಮನಿಸುತ್ತಿರುವುದು ಕಂಡು ಬಂದಿದೆ. ಭಯಗೊಂಡ ಬಾಲಕಿ ಈ ವಿಷಯವನ್ನು ತಾಯಿಗೆ ತಿಳಿಸಿದ್ದಾಳೆ .
ಬಾಲಕಿಯ ತಾಯಿ ತನ್ನ ಕಚೇರಿ ಮಾಲೀಕರೊಂದಿಗೆ ಬಸ್ ನಿಲ್ದಾಣಕ್ಕೆ ಬಂದಾಗ ಅಲ್ಲಿ ಇದ್ದ ಅಪರಿಚಿತ ವ್ಯಕ್ತಿಯನ್ನು ವಿಚಾರಿಸಲಾಗಿದೆ. ಆತ ತನ್ನ ಹೆಸರು ಜಯಂತ್ ಎಂದು ಹೇಳಿ ಅಲ್ಲಿಂದ ತೆರಳಿದ್ದಾನೆ. ಈ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 116/2026, ಕಲಂ: 78 BNS 2023 ಮತ್ತು ಕಲಂ 12 POCSO Act 2012 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತನಿಖೆ ನಡೆಸಿದ ಪೊಲೀಸರು ಆರೋಪಿ ಬಂಟ್ವಾಳ, ಸರಪಾಡಿ ನಿವಾಸಿ ಜಯಂತ್ (47) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








