ಸುಳ್ಯ: ಕಳಗಿ ಬಾಲಚಂದ್ರರ ಹತ್ಯೆ ಆರೋಪಿಗಳಲ್ಲಿ ಓರ್ವನಾದ ಕಲ್ಲುಗುಂಡಿಯ ಸಂಪತ್ ನನ್ನು ಅ.8 ರಂದು ಕೊಲೆಗೈದ ಆರೋಪಿಗಳ ಅಡಗುತಾಣದ ಸುಳಿವು ಪೊಲೀಸರಿಗೆ ಲಭ್ಯವಾಗಿದೆ.ಈಗಾಗಲೇ ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್ ಪೆಕ್ಟರ್ ಚೆಲುವರಾಜ್ ತಂಡ ಮತ್ತು ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ತಂಡ ಮತ್ತು ಆರೋಪಿಗಳ ಅಡಗು ತಾಣದ ಮಾಹಿತಿಯನ್ನು ಪಡೆದಿದ್ದಾರೆ ಎಂದು ಮತ್ತು ಹೊರ ಜಿಲ್ಲೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಎರಡು ತಂಡಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂಬ ಮಾಹಿತಿ ದೊರಕಿದೆ.
ಆರೋಪಿಗಳು ಬಳಸಿದ್ದರೆಂದು ತಿಳಿಯಲಾಗಿರುವ ಕ್ವಾಲಿಸ್ ವಾಹನ ಅರಂತೋಡು ಬಳಿಯ ಕಳುಬೈಲು ಎಂಬಲ್ಲಿರುವ ರಬ್ಬರ್ ತೋಟವೊಂದರಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಸಂಪತ್ ಹತ್ಯೆಯನ್ನು ಮಾಡಿದವರು ಹಸಿರು ಬಣ್ಣದ ಕ್ವಾಲಿಸ್ ವಾಹನದಲ್ಲಿ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಈ ವಾಹನವು ಪದ್ಮನಾಭ ಚೊಕ್ಕಾಡಿಯವರ ವಾಹನವಾಗಿದೆ ಎಂದು ತಿಳಿದು ಬಂದಿದೆ. ಆ ಕ್ವಾಲಿಸ್ನ್ನು ಕಲ್ಲುಗುಂಡಿಯ ಮನು ಎಂಬಾತ ಶೂಟಿಂಗ್ ಇದೆ ಎಂದು ಹೇಳಿ ಸೆ.೩೦ ರಂದು ಕೊಂಡೊಯ್ದಿರುವುದಾಗಿ ಪದ್ಮನಾಭರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಮನು ಎಲ್ಲಿದ್ದಾನೆಂದು ಹುಡುಕಾಡುತ್ತಿದ್ದಾರೆ. ಮನುವಿನೊಂದಿಗೆ ಯಾವಾಗಲೂ ಇರುವ ಕೆಲವು ಯುವಕರು ಕೂಡ ಕಾಣೆಯಾಗಿದ್ದು, ಅದೇ ತಂಡ ಸಂಪತ್ ಕೊಲೆಯ ದುಷ್ಕೃತ್ಯ ನಡೆಸಿದವರೆಂದು ಪೋಲೀಸರಿಗೆ ಖಚಿತವಾಗಿದೆ. ಆ ಹಿನ್ನೆಲೆಯಲ್ಲಿ ಅವರನ್ನು ಸೆರೆ ಹಿಡಿಯಲು ಪ್ರಯತ್ನ ನಡೆಸಲಾಗುತ್ತಿದೆ.
ಕ್ವಾಲಿಸ್ ವಶ ಅರಂತೋಡು ಗ್ರಾಮದ ಕಳುಬೈಲು ಎಂಬಲ್ಲಿ ಮನೀಶ್ ಬಾಬು ಗೌಡ ಎಂಬವರ ರಬ್ಬರ್ ತೋಟವಿದ್ದು, ಅದನ್ನು ಅವರು ಕಲ್ಲುಗುಂಡಿಯ ಮಧು ಎಂಬ ಯುವಕನಿಗೆ ಲೀಸಿಗೆ ಕೊಟ್ಟಿದ್ದರು.
ಅ.೯ ರಂದು ಮನೀಶ್ ರವರು ಹಂದಿ ಗೂಡು ವಿಚಾರವಾಗಿ ಪರಿಶೀಲನೆಗೆಂದು ಮೇಘನಾ ಹಂದಿ ಫಾರ್ಮ್ ನವರನ್ನು ಕರೆದುಕೊಂಡು ಕಳುಬೈಲಿನ ತನ್ನ ರಬ್ಬರ್ ತೋಟಕ್ಕೆ ಹೋದಾಗ ತೋಟದಲ್ಲಿ ಹಸಿರು ಕ್ವಾಲಿಸ್ ವಾಹನ ಇದ್ದುದು ಕಂಡು ಬಂದಿದೆ. ತೋಟದಲ್ಲಿ ಮಧು ಇರಲಿಲ್ಲ. ಆತನ ಪೋನ್ ಸ್ವಿಚ್ ಆಫ್ ಆಗಿತ್ತು.
ಅದಾಗಲೇ ಮನು ತಂಡ ದವರ ಮೇಲೆ ಅನುಮಾನವಿದೆಯೆಂಬ ವದಂತಿ ಹರಡಿದ್ದುದರಿಂದ ಮನೀಶ್ ರವರು, ತಮ್ಮ ತೋಟದಲ್ಲಿ ಕ್ವಾಲಿಸ್ ಇರುವ ವಿಚಾರವನ್ನು ಪೋಲೀಸರಿಗೆ ತಿಳಿಸಿದರು. ಮನು ಮತ್ತು ಮಧು ಆಪ್ತರಾಗಿರುವ ಕಾರಣ ಮಧು ಲೀಸಿಗೆ ಪಡೆದ ತೋಟದಲ್ಲಿ ಕ್ವಾಲಿಸ್ ಬಿಟ್ಟು ಹೋಗಿರಬೇಕೆಂದು ಶಂಕಿಸಲಾಗಿದೆ.
ಪೋಲೀಸರು ಬಂದು ನೋಡುವಾಗ ವಾಹನಕ್ಕೆ ಲಾಕ್ ಮಾಡಲಾಗಿತ್ತೆನ್ನಲಾಗಿದೆ. ಬಳಿಕ ಪೋಲೀಸರು ಮಹಜರು ನಡೆಸಿ, ತಂತ್ರಜ್ಞರನ್ನು ಕರೆಸಿ ಲಾಕ್ ಓಪನ್ ಮಾಡಿಸಿ ಅಲ್ಲಿಂದ ತಂದಿರುವುದಾಗಿ ತಿಳಿದು ಬಂದಿದೆ.ಈ ಎಲ್ಲಾ ಮಾಹಿತಿ ಪಡೆದ ಪೊಲೀಸರು ಪ್ರಮುಖ ಆರೋಪಿಗಳ ಪತ್ತೆಗಾಗಿ ಹೊರಜಿಲ್ಲೆಯಲ್ಲಿ ಕಾರ್ಯಚರಣೆ ನಡೆಸಿದ್ದಾರೆ ಎಂಬ ಮಾಹಿತಿ ದೊರಕಿರುತ್ತದೆ.