



ಮಂಡ್ಯ: ನಗರದ ಗುತ್ತಲು ಸಾದತ್ ಬಡಾವಣೆಯಲ್ಲಿ ವಾಸವಿದ್ದ ಭಿಕ್ಷುಕಿ ಮೃತಪಟ್ಟ ನಂತರ, ಆಕೆಯ ಮನೆಯಲ್ಲಿ ಸುಮಾರು 8 ಲಕ್ಷ ರೂ. ಹಣ ಇರುವುದು ಬೆಳಕಿಗೆ ಬಂದಿದೆ.
ನೂರ್(75) ಎಂಬ ವೃದ್ಧೆ ಮನೆಯವರು ನೋಡಿಕೊಳ್ಳುತ್ತಿಲ್ಲ ಎಂದು ಹಲವು ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದರು. ಒಬ್ಬಂಟಿಯಾಗಿ ವಾಸವಿದ್ದ ಅವರು ಎರಡು ದಿನದಿಂದ ಮನೆಯಿಂದ ಹೊರಬಂದಿರಲಿಲ್ಲ. ಅನುಮಾನಗೊಂಡ ಅಕ್ಕಪಕ್ಕದವರು ಬಾಗಿಲು ತೆರೆದು ನೋಡಿದಾಗ ವೃದ್ಧೆ ಮೃತಪಟ್ಟಿರುವುದು ಕಂಡುಬಂದಿದೆ.
ಮನೆಯೊಳಗೆ ಕಾಲಿರಿಸಿದವರಿಗೆ ಅಲ್ಲೆಲ್ಲ ರಾಶಿ ರಾಶಿ ಇದ್ದ ಒಂದು ಎರಡು, ಐದು, ಹತ್ತು ರೂ.ಗಳ ಕಾಯಿನ್ಗಳು, ಹತ್ತು, ಇಪ್ಪತ್ತು ಐವತ್ತು ರೂ.ಗಳ ನೋಟುಗಳು ಎರಚಾಡಿದ್ದನ್ನು ನೋಡಿದ್ದಾರೆ. ಮತ್ತಷ್ಟು ಹುಡುಕಾಡಿದಾಗ ಚೀಲಗಳಲ್ಲಿ ಕಂತೆ ಕಂತೆ ನೋಟುಗಳನ್ನು ತುಂಬಿಟ್ಟಿರುವುದು ಕಂಡುಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೂಡಲೇ ಸ್ಥಳೀಯರು ಮುಖಂಡರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಮುಖಂಡರು ಮೃತದೇಹದ ದಫನ್ ಕಾರ್ಯವನ್ನು ನೆರವೇರಿಸಿದ್ದಾರೆ.’ಬದುಕಿದ್ದಾಗ ಯಾರೂ ನೋಡಿಕೊಳ್ಳಲಿಲ್ಲ, ಸತ್ತಾಗ ಹಣ ಹಂಚಿಕೊಳ್ಳಲು ಸಂಬಂಧಿಕರು ಮುಗಿಬಿದ್ದಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿರುವುದಾಗಿ ತಿಳಿದುಬಂದಿದೆ.








