
ಬೆಂಗಳೂರು: ಅಸಲಿ ಔಷಧ ಮಾರಾಟ ಏಜೆನ್ಸಿಯಲ್ಲಿನಷ್ಟ ಉಂಟಾಗಿದ್ದರಿಂದ ಆರೋಪಿಗಳು ನಕಲಿ ಔಷಧ ಮಾರಾಟ ದಂಧೆಗೆ ಇಳಿದಿದ್ದರು ಎಂಬುದು ಎಸ್ಐಟಿ ತನಿಖೆಯಿಂದ ಪತ್ತೆಯಾಗಿದೆ.ಬೆಂಗಳೂರು ದಕ್ಷಿಣ ಜಿಲ್ಲೆಯ ದೊಡ್ಡರಿ ಫಾರ್ಮ್ ಹೌಸ್ನಲ್ಲಿ ಪತ್ತೆಯಾದ ನಕಲಿ ಔಷಧ ಮಾರಾಟ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥ ವಂಶಿಕೃಷ್ಣ ನೇತೃತ್ವದ ತಂಡವು ಚುರುಕುಗೊಳಿಸಿದೆ.
ವಿವಿಧೆಡೆ ದಾಳಿ ನಡೆಸಿ ಪ್ರಕರಣದ ಮಾಹಿತಿ ಕಲೆ ಹಾಕುತ್ತಿದೆ.ಶಿವಮೊಗ್ಗದ ಪ್ರಶಾಂತ್ ಹಾಗೂ ರಾಯಚೂರಿನ ವೆಂಕಟೇಶ್ ಈ ಪ್ರಕರಣದ ಪ್ರಮುಖ ಆರೋಪಿಗಳು. ಕಮರ್ಷಿಯಲ್ ಸ್ಟ್ರೀಟ್, ಚಾಮರಾಜಪೇಟೆಯಲ್ಲಿ ಎರಡು ವರ್ಷಗಳಿಂದ ನಾಲ್ಕು ಕಂಪನಿಗಳ ಹೆಸರಲ್ಲಿ ನಕಲಿ ಔಷಧಗಳನ್ನು ಮಾರಾಟ ಮಾಡಿದ್ದರು ಎಂದು ಎಸ್ಐಟಿ ಮೂಲಗಳು ಹೇಳಿವೆ.’ಆರಂಭದಲ್ಲಿ ಇಬ್ಬರೂ ಪ್ರತಿಷ್ಠಿತ ಔಷಧ ಕಂಪನಿಗಳ ಮಾರಾಟದ ಪ್ರತಿನಿಧಿಗಳಾಗಿ ಕೆಲಸ ಮಾಡಿದ್ದರು.

ಬಳಿಕ, ತಮ್ಮದೇ ಔಷಧ ಮಾರಾಟದ ಏಜೆನ್ಸಿಗಳನ್ನು ಆರಂಭಿಸಿ ಅಸಲಿ ಔಷಧ ಮಾರಾಟ ಮಾಡುತ್ತಿದ್ದರು. ಏಜೆನ್ಸಿ ಮೂಲಕ ಔಷಧಿಗಳನ್ನು ಅಂಗಡಿಗಳಿಗೆ ತಲುಪಿಸುತ್ತಿದ್ದರು. ಆ ವ್ಯವಹಾರದಲ್ಲಿ ಇಬ್ಬರಿಗೂ ನಷ್ಟವಾಗಿತ್ತು. ಬಳಿಕ ತಾವೇ ಔಷಧ ಕಂಪನಿ ಆರಂಭಿಸಿದ್ದರು. ಬೇರೆ ಬೇರೆ ಹೆಸರಿನಲ್ಲಿ ಕಂಪನಿ ಹೆಸರು ನೋಂದಣಿ ಮಾಡಿ ಜಿಎಸ್ಟಿ ಸಂಖ್ಯೆ ಪಡೆದಿದ್ದರು. ಬಳಿಕ ಬೆಂಗಳೂರು ದಕ್ಷಿಣ ಜಿಲ್ಲೆಯ ಫಾರ್ಮ್ಹೌಸ್ನಲ್ಲಿ ನಕಲಿ ಔಷಧ ದಾಸ್ತಾನು ಹಾಗೂ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದರು.
ಈ ಕೆಲಸಕ್ಕೆ ಕಾರ್ಮಿಕರನ್ನು ನೇಮಿಸಿಕೊಂಡಿದ್ದರು. ಕಾರ್ಮಿಕರಿಗೆ ನಕಲಿ ಔಷಧ ದಂಧೆ ಎಂಬುದು ತಿಳಿಯದಂತೆ ನಿಗಾ ವಹಿಸಿದ್ದರು’ ಎಂದು ಎಸ್ಐಟಿ ಮೂಲಗಳು ಹೇಳಿವೆ.








