ಪಾಕಿಸ್ತಾನದ ಖೈಬರ್ ಪಾಖ್ತುನ್ಖ್ವಾ ಪ್ರಾಂತ್ಯದಲ್ಲಿ ಧ್ವಂಸಗೊಳಿಸಿರುವ ಹಿಂದೂ ದೇವಾಲಯವನ್ನು ಎರಡು ವಾರಗಳ ಅವಧಿಯಲ್ಲಿ ಪುನಃಸ್ಥಾಪಿಸುವಂತೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಪ್ರಾಂತೀಯ ಸರ್ಕಾರಕ್ಕೆ ಮಂಗಳವಾರ ಆದೇಶಿಸಿದೆ.
ಡಿಸೆಂಬರ್ 30 ರಂದು ದೇವಾಲಯವನ್ನು ಮೂಲಭೂತವಾದಿ ಪಕ್ಷದ ಸದಸ್ಯರ ನೇತೃತ್ವದಲ್ಲಿ ಗುಂಪೊಂದು ಧ್ವಂಸಗೊಳಿಸಿ ಬೆಂಕಿ ಹಚ್ಚಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಪಾಕಿಸ್ತಾನ ಪೊಲೀಸರು 350ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲಿಸಿದ್ದು ಹಲವಾರು ಜನರನ್ನು ಬಂಧಿಸಿದ್ದಾರೆ.
ಈ ಹಿಂದೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ದಾಳಿಯ ಬಗ್ಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಪ್ರಕರಣದ ವಿಚಾರಣೆಯನ್ನು ಜನವರಿ 5 ರಂದು ನಡೆಸುವುದಾಗಿ ಹೇಳಿದ್ದರು. ಆದರೆ ಕಳೆದ ವಾರ ಕರಾಚಿಯಲ್ಲಿ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತ ಶಾಸಕ ರಮೇಶ್ ಕುಮಾರ್ ಅವರು ದೇವಾಲಯವನ್ನು ಧ್ವಂಸಗೊಳಿಸಿರುವ ಬಗ್ಗೆ ವಿವರಿಸಿದ ನಂತರ ಮುಖ್ಯ ನ್ಯಾಯಮೂರ್ತಿ ಈ ಆದೇಶ ನೀಡಿದ್ದಾರೆ.
ಖೈಬರ್ ಪಾಖ್ತುನ್ಖ್ವಾ ಸರ್ಕಾರ ಮತ್ತು ಔಕಾಫ್ ಇಲಾಖೆಗೆ ಕಾಮಗಾರಿ ತಕ್ಷಣವೇ ಪ್ರಾರಂಭಿಸಿ ಎರಡು ವಾರಗಳಲ್ಲಿ ಕಾಮಗಾರಿಯ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಲಾಗಿದೆ. ದೇವಾಲಯವನ್ನು ಧ್ವಂಸಗೊಳಿಸಿದ ಜನರೇ ಅದರ ಪುನಃಸ್ಥಾಪನೆಯ ಖರ್ಚನ್ನು ಪಾವತಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
ಪಾಕಿಸ್ತಾನದ ದೇವಾಲಯಗಳ ಸಂಖ್ಯೆ ಔಕಾಫ್ ಇಲಾಖೆಗೆ ಸೇರಿದ ಜಮೀನು ಅತಿಕ್ರಮಣ, ಮತ್ತು ಭೂ ಕಬಳಿಕೆ ವಿರುದ್ಧ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆಯೂ ನ್ಯಾಯಾಲಯ ವರದಿ ಕೇಳಿದೆ. ಪಾಕಿಸ್ತಾನದ ಎಲ್ಲಾ ದೇವಾಲಯಗಳು ಔಕಾಫ್ ಇಲಾಖೆಯ ವ್ಯಾಪ್ತಿಗೆ ಬರುತ್ತವೆ.