




ಸುಳ್ಯ: ಶ್ರೀರಾಮ್ ಫೈನಾನ್ಸ್ ಸಂಸ್ಥೆಯಿಂದ 10 ಲಕ್ಷ ರೂ. ಸಾಲ ಪಡೆದು ಟೆಲ್ಕಾನ್ ಇ ಎಕ್ಸ್ 70 ಮೆಷಿನ್ ವಾಹನ ಖರೀದಿಸಿ, ಸಾಲದ ಕಂತು ಪಾವತಿಸದೆ ವಂಚನೆ ಮಾಡಿದ ಪ್ರಕರಣದಲ್ಲಿ 14 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸುಳ್ಯದ ಜಾಲ್ಸೂರು ಗ್ರಾಮದ ನಿವಾಸಿ ಶ್ರೀನಿವಾಸ ಬಿ.ಆರ್ (48) ಎಂದು ಗುರುತಿಸಲಾಗಿದೆ.
ಆರೋಪಿಯು 2009ರ ಮೇ ತಿಂಗಳಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಷರತ್ತುಗಳಿಗೆ ಒಪ್ಪಿ ವಾಹನ ಖರೀದಿಗೆ 10 ಲಕ್ಷ ರೂ. ಸಾಲ ಪಡೆದು, ಬಳಿಕ ಕಂತು ಪಾವತಿಸದೆ, ತಪಾಸಣೆಗೆ ವಾಹನ ಹಾಜರುಪಡಿಸದೆ ವಂಚನೆ ಮಾಡಿದ್ದಾನೆ ಎಂಬ ಆರೋಪದ ಮೇಲೆ 2012 ರಲ್ಲಿ ಮೂಡಬಿದ್ರೆ ಠಾಣೆಯಲ್ಲಿ ಅ.ಕ್ರ. 59/2012, ಕಲಂ 406, 420, 421 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಸಿಸಿ ನಂಬರ್ 526/2025 ರಲ್ಲಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉತ್ತರ ಉಪವಿಭಾಗದ ಅಪರಾಧ ಪತ್ತೆ ತಂಡವು ಸೆ. 2, 2026 ರಂದು ಜಾಲ್ಸೂರು ಗ್ರಾಮದ ಬೈತಡ್ಕ ಜಂಕ್ಷನ್ ಬಳಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈತನ ವಿರುದ್ದ ಬಾಕಿ ಇರುವ ದಸ್ತಗಿರಿ ವಾರಂಟ್ಗಳು:
1] ಮೂಡಬಿದ್ರೆ ಠಾಣಾ ಅ.ಕ್ರ. 59/2012 ಕಲಂ 406, 420, 421 ಜತೆಗೆ 34 ಐಪಿಸಿ (ಸಿಸಿ ನಂಬ್ರ 526/2025)
2] ಮಾನ್ಯ ಜೆಎಂಎಫ್ ಸಿ 5 ನೇ ನ್ಯಾಯಾಲಯ, ಮಂಗಳೂರು ಸಿಸಿ ನಂಬ್ರ 1453/2024 (ಚೆಕ್ ಬೌನ್ಸ್ ಪ್ರಕರಣ)








