ಉತ್ತರ ಪ್ರದೇಶ: ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಅತ್ಯಾಚಾರ ಪ್ರಕರಣ ದಾಖಲಾಗಿದ್ದು ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ‘ನಿರ್ಭಯಾ’ ಪ್ರಕರಣದ ಭೀಕರತೆಯನ್ನು ನೆನಪಿಸುವಂತೆ ಮಾಡಿದೆ.

ಬದೌನ್ ಜಿಲ್ಲೆಯ ಉಘೈತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರ ಸಂಜೆ ಗ್ರಾಮದ ಮಹಿಳೆಯೊಬ್ಬರು ದೇವಸ್ಥಾನವೊಂದಕ್ಕೆ ತೆರಳಿದ್ದರು. ಆದರೆ ಆ ಬಳಿಕ ಆಕೆ ಮನೆಗೆ ಹಿಂದಿರುಗಿರಲಿಲ್ಲ. ರಾತ್ರಿ 12 ಗಂಟೆಯ ಸುಮಾರಿಗೆ ಒಬ್ಬರು ಕಾರು ಚಾಲಕ ಮತ್ತು ಇಬ್ಬರು ವ್ಯಕ್ತಿಗಳು ರಕ್ತದ ಮಡುವಿನಲ್ಲಿ ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬಳಿಕ ರಾತ್ರಿ ಮಹಿಳೆ ಸಾವಿಗೀಡಾಗಿದ್ದಾಳೆ.

ದೂರು ನೀಡಿದ ಬಳಿಕವೂ ಉಘೈಟಿ ಪೊಲೀಸ್ ಠಾಣೆಯ ಅಧಿಕಾರಿ ರವೇಂದ್ರ ಪ್ರತಾಪ್ ಸಿಂಗ್ ಸ್ಥಳಕ್ಕೆ ಬಂದಿರಲಿಲ್ಲ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ. ಅತ್ಯಾಚಾರ ಎಸಗಿ ಕ್ರೂರವಾಗಿ ಹಿಂಸಿಸಿದ್ದ ದುಷ್ಕರ್ಮಿಗಳು ಸಂತ್ರಸ್ತೆಗೆ ಚಿಕಿತ್ಸೆ ಒದಗಿಸುವ ಸಲುವಾಗಿ ಕಾರ್ನಲ್ಲಿ ಚಾಂಡೌಸಿಗೆ ಕರೆದೊಯ್ದಿದ್ದರು ಎನ್ನುವುದು ತನಿಖೆಯಿಂದ ಗೊತ್ತಾಗಿದೆ.

ಅಂಗನವಾಡಿಯಲ್ಲಿ ಸಹಾಯಕಿಯಾಗಿದ್ದ ಮಹಿಳೆ ಸುಮಾರು 50 ವರ್ಷ ವಯಸ್ಸಿನವರಾಗಿದ್ದು, ಆರಾಧನಾ ಸ್ಥಳದ ಒಳಗೇ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಆಕೆಯ ಗುಪ್ತಾಂಗಗಳಿಗೆ ರಾಡ್ನಂತಹ ವಸ್ತುವನ್ನು ತುರುಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಮಂಗಳವಾರ ಲಭಿಸಿದ್ದು. ಮಹಿಳೆಯ ಪಕ್ಕೆಲುಬು ಮತ್ತು ಕಾಲನ್ನು ಮುರಿಯಲಾಗಿದೆ. ಶ್ವಾಸಕೋಶಕ್ಕೆ ಬಲವಾದ ವಸ್ತುವಿನಿಂದ ದಾಳಿ ಮಾಡಲಾಗಿದೆ. ಮಹಿಳೆಯ ಖಾಸಗಿ ಭಾಗಕ್ಕೆ ಗಂಭೀರ ಹಾನಿ ಮಾಡಲಾಗಿದೆ ಮತ್ತು ಆಕೆಗೆ ತೀವ್ರ ರಕ್ತಸ್ರಾವವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ಆರೋಪಿಗಳಲ್ಲಿ ಓರ್ವನನ್ನು ಬಂಧಿಸಲಾಗಿದೆ. ಉಳಿದದವರ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ.


