




ಮಂಗಳೂರು: ಪೊಲೀಸ್ ಅಧಿಕಾರಿಗಳು ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ(KSHRC) ತನಿಖೆಗೆ ಆದೇಶಿಸಿದೆ.
ಅಮಾನತಿನಲ್ಲಿರುವ ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಮತ್ತು ಮಂಗಳೂರು ಉತ್ತರ(ಪಣಂಬೂರು) ವಿಭಾಗದ ಎಸಿಪಿ ಶ್ರೀಕಾಂತ್ ಅವರ ವಿರುದ್ಧ ಉನ್ನತಾಧಿಕಾರಿಗಳಿಂದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಆಯೋಗ ನಿರ್ದೇಶನ ನೀಡಿದೆ.
(ಪ್ರಕರಣ ಸಂಖ್ಯೆ: 3141/10/21/2026) ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಚೋಳ್ಯಾಡಿ ರಸ್ತೆ ನಿವಾಸಿ ಶ್ರೀಮತಿ ಸುಮತಿ ನಾಯ್ಕ್ ಅವರು ಆಯೋಗಕ್ಕೆ ದೂರು ಸಲ್ಲಿಸಿದ್ದರು. ತಮ್ಮ ಗಮನಕ್ಕೆ ತರದೆ ಆಧಾರ್ ಸಂಖ್ಯೆ, ಮೊಬೈಲ್ ವಿವರ, ಪಾಸ್ಪೋರ್ಟ್ ಸೇರಿದಂತೆ ಅತ್ಯಂತ ಗೌಪ್ಯ ವೈಯಕ್ತಿಕ ದತ್ತಾಂಶಗಳನ್ನು ‘ನ್ಯಾಟ್ಗ್ರಿಡ್’ (NATGRID) ವ್ಯವಸ್ಥೆ ಮೂಲಕ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ದೂರನ್ನು ಪರಿಶೀಲಿಸಿದ ಆಯೋಗದ ಸದಸ್ಯರಾದ ಎಸ್.ಕೆ. ವಂಟಿಗೋಡಿ ಅವರು ತನಿಖೆಗೆ ಆದೇಶಿಸಿ ಅಧಿಕೃತ ನಿರ್ದೇಶನ ಹೊರಡಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರು ಹಿರಿಯ ಅಧಿಕಾರಿಯ ಮೂಲಕ ಸಮಗ್ರ ವಿಚಾರಣೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಂಡು ಅಕ್ಟೋಬರ್ 06, 2026ರೊಳಗೆ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಈ ಪ್ರಕರಣದ ಮುಂದಿನ ವಿಚಾರಣೆ ಮತ್ತು ವರದಿ ಪರಿಶೀಲನೆಯನ್ನು ಅಕ್ಟೋಬರ್ 07, 2026ರಂದು ಆಯೋಗದ ಮುಂದೆ ಮಂಡಿಸಲು ದಿನಾಂಕ ನಿಗದಿಪಡಿಸಲಾಗಿದೆ.








