




ಹಾಸನ: ಕೆಎಸ್ಆರ್ಟಿಸಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಗೃಹಿಣಿ ಬಲಿಯಾಗಿರುವ ಘಟನೆ ಹಾಸನ ನಗರದ ಎನ್.ಆರ್.ವೃತ್ತದಲ್ಲಿ ನಡೆದಿದೆ.
ಅಪರ್ಣ.ಡಿ.ಜೆ. (31) ಸಾವನ್ನಪ್ಪಿದ ಮಹಿಳೆ. ಹಾಸನ ತಾಲೂಕಿನ ದೊಡ್ಡಆಲದಹಳ್ಳಿ ಗ್ರಾಮದ ಅಪರ್ಣ ಬೆಂಗಳೂರಿನಲ್ಲಿ ಪತಿ ಯೋಗೀಶ್ ಜೊತೆ ನೆಲೆಸಿದ್ದರು. ಗೌರಿ-ಗಣೇಶ ಹಬ್ಬ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ತವರು ಮನೆಗೆ ಬಂದಿದ್ದರು. ಇಂದು ಆಸ್ಪತ್ರೆಗೆಂದು ಹಾಸನ ನಗರಕ್ಕೆ ಬಂದಿದ್ದು ಆಸ್ಪತ್ರೆಗೆ ಸ್ನೇಹಿತೆ ರಕ್ಷಿತಾ ಜೊತೆ ಸ್ಕೂಟಿಯಲ್ಲಿ ಹೋಗಿ ಊರಿಗೆ ವಾಪಾಸ್ ತೆರಳುತ್ತಿದ್ದ ವೇಳೆ ವೇಗವಾಗಿ ಬಂದು ಹಿಂಬದಿಯಿಂದ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದು, ಅಪರ್ಣ ಹಾಗೂ ರಕ್ಷಿತಾ ರಸ್ತೆಗೆ ಬಿದ್ದಿದ್ದಾರೆ. ಬಸ್ ಚಕ್ರಕ್ಕೆ ಅಪರ್ಣ ಸಿಲುಕಿದ್ದು ಸ್ವಲ್ಪ ದೂರ ಅವರನ್ನು ಎಳೆದೊಯ್ದಿದೆ. ಕೂಡಲೇ ಅಪರ್ಣ ಅವರನ್ನು ಚಕ್ರದಿಂದ ಹೊರಗೆಳೆದು ಜಿಲ್ಲಾಸ್ಪತ್ರೆಗೆ ಆಟೋ ಚಾಲಕ ಕುಮಾರ್ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಅಪರ್ಣ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಬಸ್ ಚಾಲಕ ಬ್ರೇಕ್ ಹಿಡಿಯಲಿಲ್ಲ ಎಂದು ಕಾರಣ ಹೇಳಿದ್ದು ಮೃತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತದಲ್ಲಿ ಮೃತೆ ಅಪರ್ಣ ಎರಡು ಎಳೆ ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿರುವ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ








