ಬೆಂಗಳೂರು: ಕೂಲಿ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಊರಿಂದ ಊರಿಗೆ ಅಲೆದಾಡುತ್ತಿರುತ್ತಾರೆ. ಇಂತಹ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ, ಬಿಬಿಎಂಪಿ ಮನೆ ಬಾಗಿಲಿಗೆ ಶಾಲೆ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಸಲುವಾಗಿ ಪಾಲಿಕೆ ಈ ಯೋಜನೆ ರೂಪಿಸುತ್ತಿದೆ. ಸ್ಲಂ ಗಳಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಮನೆ ಬಾಗಿಲಿಗೆ ಶಾಲೆ ಎಂಬ ಪರಿಕಲ್ಪನೆಯಡಿ ಬಸ್ ಗಳನ್ನೇ ಶಾಲೆಯನ್ನಾಗಿ ಪರಿವರ್ತಿಸಿ ವಿದ್ಯಾಭ್ಯಾಸ ನೀಡಲು ಮುಂದಾಗಿದೆ.
ಈ ಬಗ್ಗೆ ಬಿಎಂಟಿಸಿ ಯಿಂದ ಈಗಾಗಲೇ ಪಾಲಿಕೆಯು 10 ಬಸ್ ಗಳನ್ನು ಪಡೆದಿದ್ದು, ಬಸ್ಗಳಿಗೆ ಹೊಸ ರೂಪ ನೀಡಲಾಗಿದೆ. ಪಾಲಿಕೆ ವತಿಯಿಂದಲೇ ಶಿಕ್ಷಕರು ಹಾಗೂ ಚಾಲಕರನ್ನು ನೇಮಕ ಮಾಡಿ ಹೆಚ್ಚು ಮಕ್ಕಳಿರುವ ಕೊಳಗೇರಿ ಪ್ರದೇಶಗಳಿಗೆ ಬಸ್ ಗಳನ್ನು ಕಳುಹಿಸಿ ಪಾಠ ಕಲಿಸಲಾಗುತ್ತದೆ. ಈ ಕಾರ್ಯಕ್ಕೆ ಈಗಾಗಲೇ ಬಿಎಂಟಿಸಿ ಬಸ್ಸುಗಳು ಕೂಡ ಸಿದ್ಧಗೊಂಡಿವೆ ಎಂದು ಬಿಎಂಟಿಸಿ ನಿರ್ದೇಶಕ ಕೆ ಸಂತೋಷ್ ಬಾಬು ತಿಳಿಸಿದ್ದಾರೆ.